Monday, October 06, 2008

ಡಿಪ್ರೆಷನ್ ನೆಪದಲ್ಲಿ ನೆನಪಿನ ಗುಂಗು

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ.
ಹೇಳುವುದು ಏನು ಉಳಿದು ಹೋಗಿದೆ
ಹೇಳಲಿ ಹೇಗೇ ತಿಳಿಯದಾಗಿದೆ.


ಅಷ್ಟಕ್ಕೂ ಇದು ಡಿಪ್ರೆಷನ್ನಾ? ಇಲ್ಲ ದುಃಖದ ಸಂಕ್ರಮಣ ಕಾಲವಾ? ಯಾಕೋ ಗೊತ್ತಿಲ್ಲ ಕಳೆದ ಕೆಲ ತಿಂಗಳುಗಳ ಕೆಲವು ದಿನಗಳಲ್ಲಿ ತೀರಾ ಅತಿ ಎನ್ನುವಷ್ಟು ಏಕಾಂತತೆ ಮೂಡುತ್ತಿದೆ. ತೀವ್ರ ದುಗುಡ ಕಾಡುತ್ತಿದೆ. ಕಾಲೇಜು ದಿನಗಳಲ್ಲಿ ಡಿಪ್ರೆಷನ್ ಆಗಾಗ ಕಾಡ್ತಾ ಇತ್ತು. ಆದರೆ ಅಂದಿನ ಡಿಪ್ರೆಷನ್‌ಗೆ ಕಾರಣಗಳಿದ್ದವು. ಅದು ನಾನು ಬೆಳೆದು ಬಂದ ರೀತಿ ಎಂದು ಕೊಂಡಿದ್ದೆ. ಈ ಡಿಪ್ರೆಷನ್‌ನಿಂದಾಗಿ ಬ್ಲಾಗ್ ಕೆಲಕಾಲ ನಿಂತ ನೀರಾಗಿತ್ತು. ಅಲ್ಲಿಂದ ಮುಂದೆ ಬ್ಲಾಗ್ ರೀ ಲಾಂಚ್ ಮಾಡಬೇಕೆಂದು ಕೊಂಡಿದ್ದೆ. ಆದರೆ ಕೆಲವು ಅನಿವಾರ್‍ಯತೆಗೆ ಸಿಲುಕಿ ಅದನ್ನೂ ಅರ್ಧಕ್ಕೆ ಕೈಬಿಟ್ಟಿದ್ದೆ. ಆದರೂ ನಿಮ್ಮ ಭರವಸೆ ಸುಳ್ಳು ಮಾಡುವುದಿಲ್ಲ. ಬ್ಲಾಗ್ ರೀ ಲಾಂಚ್ ಮಾಡೇ ಮಾಡ್ತೀನಿ. ಕೆಲವರಿಗೆ ಅಚ್ಚರಿಯನ್ನೂ ಕೊಡ್ತೀನಿ.


ಆದರೆ ಬ್ಲಾಗ್ ಪೋಸ್ಟ್ ಇಲ್ಲದ್ದನ್ನೇ ನೆಪ ಮಾಡಿಕೊಂಡು ಕೆಲವರು ಬೈದರು. ಇನ್ನು ಕೆಲವರು ಬೆನ್ನ ಹಿಂದೆ ಜೋತು ಬಿದ್ದರು. ಆದರೆ ಅಷ್ಟರಲ್ಲಾಗಲೇ ಆಪರೇಷನ್ ಎಂಬ ಅನಿವಾರ್‍ಯತೆಗೆ ಬಿದ್ದು ಮನೆಯಲ್ಲಿ ರೆಸ್ಟ್ ತಗೊಂಡೆನಲ್ಲಾ ಆಗ ಕಾಡಿತ್ತು ಇದೇ ಡಿಪ್ರೆಷನ್. ಆಗ ಕಾಡಿತ್ತು ನೆನಪುಗಳ ಮಧುರ ಸ್ಮೃತಿ. ಬಾಲ್ಯದ ತುಂಟಾಟಗಳಿಂದ ಆರಂಭಿಸಿ ಶಾಲೆಗೆ ಹೋಗುತ್ತಿದ್ದ ದಿನಗಳನ್ನು ನೆನಪಿಸಿ ಕೊನೆಗೆ ಹೈಸ್ಕೂಲ್ ದಡದಲ್ಲಿ ತಂದು ನಿಲ್ಲಿಸಿತ್ತು.


ಹೈಸ್ಕೂಲ್ ಗೆಳೆಯರಲ್ಲಿ ಕೆಲವರು ನೆನಪಾದರು. ಕೆಲವರ ನೆನಪು ಕಾಡಲೇ ಇಲ್ಲ. ನಂತರ ಪ್ಲಸ್ ಟು ಎಂಬ ಪಿಯುಸಿಯತ್ತ ತಿರುಗಿತ್ತು ಮನ. ಅಲ್ಲೂ ಅಷ್ಟೇ, ಪ್ರೀತಿಯಿಂದ ಕಲಿಸಿದ ಮೇಡಂ, ಗೆಳತಿಯರು, ಗೆಳೆಯರು ಮುಂತಾದವರ ಚಿತ್ರಣಗಳು ಮುಂದೆ ಬಂದು ಡಿಗ್ರಿಯ ಕಡೆಗೂ ಮುಗಿಸೀ ಯುನಿವರ್ಸಿಟಿ ಬಾಗಿಲಲ್ಲಿ ತಂದು ನಿಲ್ಲಿಸಿತ್ತು.


ಅಲ್ಲಿ ನೋಡಿದರೆ ಸಾಧನೆಗಳ ಸರಮಾಲೆ. ತಕ್ಷಣ ನೆನಪಾಗಿದ್ದು ಆ ಸಮಯದಲ್ಲಿ ಮಾಡುತ್ತಿದ್ದ ಚೇಷ್ಟೆಗಳು ಮಾತ್ರ. ತಕ್ಷಣ ಜೋಪಾನವಾಗಿ ತೆಗೆದಿರಿಸಿದ್ದ ಕೆಲವು ನೋಟ್ ಪ್ಯಾಡ್‌ಗಳು ಮಾತ್ರ. ನಿದ್ದೆ ಬರಿಸುತ್ತಿದ್ದ ಕೆಲವು ಸೆಮಿನಾರ್‌ಗಳಲ್ಲಿ ನಿದ್ದೆಯನ್ನು ಹೋಗಲಾಡಿಸಲು ಗೀಚಿದ್ದ ಕೆಲವು ಸಾಲುಗಳು ಕಂಡವು. ನಿಜಕ್ಕೂ ಅದ್ಭುತವದು. ಪ್ರತಿಯೊಂದು ಸಾಲಿಗೂ ಅದರದೇ ಆದ ಅದ್ಭುತ ಕಾರಣಗಳು. ಕೆಲವು ಪುಟಗಳಲ್ಲಿ ಕಾಣಿಸುತ್ತಿದ್ದ ಅಕ್ಷರಗಳನ್ನು ಕಂಡಾಗ ಸುಮ್ಮನೆ ಆ ದಿನಗಳನ್ನು ನೆನಪಿಸಿಕೊಂಡೆ.


ಮತ್ತೆ ಸುಮಾರು ಹೊತ್ತು ಆ ಸೆಮಿನಾರ್ ನೋಟ್‌ಗಳ ಅನಗತ್ಯವಾಗಿ ಗೀಚಿದ್ದ ಕೆಲವು ಸಾಲುಗಳನ್ನು ನೆನಪಿಸಿಕೊಂಡು ನಕ್ಕು ಬಿಟ್ಟಿದ್ದೆ. ನಿಜಕ್ಕೂ ಆ ದಿನಗಳೇ ಬಲು ಸುಂದರ ಅನಿಸಿದ್ದವು. ಕೆಲವರು ನೋಟ್‌ಗಳನ್ನು ಬರೆಯಬೇಕಾದರೆ ಇದು ಕನ್ನಡವಾ? ನಂಗೆ ಹಾಗನಿಸುತ್ತಿಲ್ಲ ಎಂದ ವರಾತ ಎತ್ತುತ್ತಿದ್ದರು. ನೀನು ಬರೆದಿದ್ದನ್ನು ನೀನೇ ಅರ್ಥ ಮಾಡಿಕೊಳ್ಳಬೇಕು ಎಂಬ ಹಿತನುಡಿಯೂ ಇತ್ತು. ಹಾಗೆ ಅದನ್ನೆಲ್ಲಾ ನೆನಪಿಸಿಕೊಂಡು ಕನ್ನಡದಲ್ಲಿ ಬರೆಯೋಕೆ ಟ್ರೈ ಮಾಡುತ್ತೇನೆ. ನಿಜಕ್ಕೂ ಅಂದಿನ ಕನ್ನಡವೇ ಸುಂದರವಾಗಿ ಇತ್ತು ಎಂದು ಅನಿಸೋಕೆ ಶುರುವಾಗಿತ್ತು. ಕಳೆದ ಎರಡೂವರೆ ವರ್ಷಗಳಲ್ಲಿ ಅಪ್ಪಿ ತಪ್ಪಿಯೂ ಪೆನ್ ಕೈಯಲ್ಲಿ ಹಿಡಿದು ಬರೆದವನಲ್ಲ. ಏನಿದ್ದರೂ ಇಂದು ಕಂಪ್ಯೂಟರ್. ಮತ್ತೆಲ್ಲಿಯ ಸುಂದರ ಅಕ್ಷರದ ಮಾತು.


ಅಂತೂ ಒಂದು ತಿಂಗಳ ರೆಸ್ಟ್ ಹಲವು ತಿರುವುಗಳಿಗೆ ಕಾರಣವಾಗಿತ್ತು. ಯಾವತ್ತು ಬೆಂಗಳೂರಿನಿಂದ ಹೊರಟನೋ ಅಲ್ಲಿಂದಲೇ ಎಲ್ಲವೂ ಪೂರ್ವ ನಿಶ್ಚಯವೇನೋ ಎಂಬಂತೆ ಜೀವನ ಸಾಗಿತ್ತು. ಇದುವರೆಗೆ ಸಾಧಿಸಿದ ಸಾಧನೆಗಳು, ಕೆಲವು ತಿರುವುಗಳು, ಕೆಲವು ಲಾಭ ನಷ್ಟದ ಲೆಕ್ಕಾಚಾರ, ಕೆಲವು ರಾತ್ರಿಯ ಭಯಾನಕ ವಾಕಿಂಗ್ ಎಲ್ಲವನ್ನೂ ನೆನಪಿಸಿಕೊಟ್ಟಿತ್ತು. ಅಷ್ಟಕ್ಕೂ ಉದ್ದೇಶ ಪೂರ್ವಕವಾಗಿ ನಾನೇನೂ ಜ್ಞಾಪಿಸಿಕೊಳ್ಳಲಿಲ್ಲ. ಎಲ್ಲವೂ ನಿಂತ ನೀರಲ್ಲ ಹರಿದಾಡುವ ನೀರು. ಬೇಕೆನಿಸಿದಾಗ ತೆಗೆದುಕೋ, ಬೇಡವೆನಿಸಿದಾಗ ಬಿಟ್ಟುಹೋಗು ಎಂದು ಜೀವನ ಯಾವತ್ತೂ ಹೇಳಿಕೊಟ್ಟಿಲ್ಲ.


ಹಾಗೆ ಮೊನ್ನೆ ಬರೆದ ಬ್ಲಾಗ್ ಪೋಸ್ಟ್ ನೋಡಿ ಒಲುಮೆಯ ಗೆಳೆಯ ಕೃಷ್ಣಮೋಹನ, ಬ್ಲಾಗ್ ಸ್ನೇಹಿತರಾದ ಚಿತ್ರಾ ಕರ್ಕೇರಾ, ಮಾನಸ ಹೆಗ್ಡೆ ಕೆಲವು ಹಿತವಚನ ನೀಡಿದ್ದಾರೆ. ಯಾಕೋ ಅವರೆಲ್ಲ ಬ್ಲಾಗ್ ಬರಹ ಮೆಚ್ಚಿರುವಾಗ ಬರವಣಿಗೆ ನಿಲ್ಲಿಸಬಾರದು ಎಂದು ಅಂದುಕೊಂಡಿದ್ದೇನೆ. ಕೃಷ್ಣಮೋಹನ ಬ್ಲಾಗ್‌ನಲ್ಲಿ ಅಗಲಿದ ಗೆಳೆಯನ ಬಗ್ಗೆ ಓದಿದಾಗ ಯಾಕೋ ಬಾಲ್ಯದ ಹಲವು ನೆನಪುಗಳು ಬಂದವು. ಅದನ್ನು ರಾತ್ರಿಯೇ ಕುಳಿತು ಅದೇ ಅರ್ಥವಾಗದ ಭಾಷೆಯಲ್ಲಿ ಬರೆದು ಮುಗಿಸಿದೆ. ಈಗ ಅವರ ಹೇಳಿಕೆಗೆ ಸಂಪೂರ್ಣ ಒಪ್ಪಿಗೆ ಸೂಚಿಸುತ್ತಿದ್ದೇನೆ.


ನೆನಪುಗಳ ಮಾತು ಮಧುರ ಎನ್ನುವುದು ಯಾವುದೋ ಬ್ಲಾಗ್‌ನಲ್ಲಿ ಕಂಡ ಪಂಚ್‌ಲೈನ್. ನಿಜವಾಗಲೂ ಹೌದಲ್ಲ. ಇಷ್ಟೆಲ್ಲಾ ಬರೆದು ಮುಗಿಸುವ ಹೊತ್ತಿಗೆ ಮೊಬೈಲ್‌ನಲ್ಲಿ ಹಾಡು ಆರಂಭವಾಗಿತ್ತು.


ಅದೇ ದಾರಿ, ಅದೇ ತಿರುವು, ಈ ಪಯಣ ನೂತನ
ನನ್ನಾ ಮೋಡ, ನನ್ನಾ ಹಾಡು, ನನ್ನಾ ಕನಸೇ ಒಮ್ಮೆ ನೋಡು
ನನ್ನಾ ಚೆಲುವಿನ ನಂದನಾ, ಏನೋ ಮಧುರ ಈ ಬಂಧನಾ


ಎಷ್ಟು ಸುಂದರ ಸಾಲುಗಳು. ಬೇಡ ಇನ್ನು ಬರೆದರೆ ಭಾವನೆಗಳ ಅಲೆಯಲ್ಲಿ ಮತ್ತೆ ಮುಳುಗಿ ಏಳಬೇಕಾಗುತ್ತದೆ. ಮತ್ತೆ ನೆನಪಿನ ಸಾಲುಗಳ ಮೊರೆ ಹೋಗಬೇಕಾಗುತ್ತೆ.
ಇವಿಷ್ಟು ಕಳೆದ ಕೆಲ ದಿನಗಳಲ್ಲಿ ಕಾಡುತ್ತಿದ್ದ ಡಿಪ್ರೆಷನ್ ವೇಳೆ ಮನಸ್ಸಿಗೆ ಅತ್ಯಂತ ಗಾಢವಾಗಿ ಕಾಡಿದವುಗಳು.
ಚಿತ್ರ ಕೃಪೆ: ಇಂಟರ್ ನೆಟ್

8 comments:

ಚಿತ್ರಾ ಸಂತೋಷ್ said...

ಹಲೋ ಚೆವಾರ್,
ನಮಸ್ಕಾರ...ನಮಸ್ಕಾರ...
ಚೆನ್ನಾಗಿ ಬರೆದಿದ್ದೀರಿ..ಡಿಪ್ರೆಶನಲ್ಲಿದ್ದುಕೊಂಡೇ...ಬರೆಯುತ್ತಾ ಇದ್ರೆ ತುಂಬಾ ಚೆನ್ನಾಗಿ ಬರೆಯುತ್ತೀರಿ ಕಣ್ರೀ. ನೋವು ತುಂಬಾ ಕಲಿಸಿಕೊಡುತ್ತೆ..ಅದ್ರಲ್ಲಿ ಬರಹನೂ ಒಂದು. ಓದೋಕೆ ನಾವಂತೂ ಇದ್ದೀವಿ. ಮತ್ತಷ್ಟು ಬರವಣಿಗೆಯ ನಿರೀಕ್ಷೆಯಲ್ಲಿರುತ್ತೀವಿ.
-ಚಿತ್ರಾ

Chevar said...

@ Chitra,

ನಿಮ್ಮ ನಿರೀಕ್ಶೆಯ ಸುಳ್ಳು ಮಾಡುವುದಿಲ್ಲ.

VENU VINOD said...

ಏನ್ ಗುರುವೇ ನಮಗೆಲ್ಲಾ ಬ್ಲಾಗ್ ಹುಚ್ಚು ಹಿಡಿಸಿ ನೀನೀಗ ಡಿಪ್ರೆಶನ್, ಮಣ್ಣು ಮಸಿ ಅಂತೆಲ್ಲಾ ಹೇಳಿದ್ರೆ ಹ್ಯಾಗೆ ? :)

ತೇಜಸ್ವಿನಿ ಹೆಗಡೆ said...

ನೆನಪುಗಳಿಗೆ ಬದುಕಿನ ಹಂಗಿಲ್ಲ. ಅದಕ್ಕಿರುವುದು ಕಾಲದ ಹಂಗು ಮಾತ್ರ. ಕಾಲ ಒಂದೇ ನಮ್ಮೊಳಗಿನ ನೆನಪುಗಳನ್ನು ಮರೆವಾಗಿಸಬಹುದು.. ಮುಂದೇ ಇದೇ ಕಾಲ ಅಕಾಲದಲ್ಲಿ ಮರೆವಿನ ಪೊರೆ ಕಳಚಿ ನೆನಪನ್ನು ಹಸಿರಾಗಿಸಲೂ ಬಹುದು. ಇದನ್ನು ತಡೆಯಲಾಗದು.. ಅನಿಯಂತ್ರಿತ. ನೆನಪುಗಳ ಗುಂಗು ಹೀಗೇ ಮುಂದುವರಿಯುತ್ತಿರಲಿ.. ಬ್ಲಾಗ್ ಅಪ್‌ಡೇಟ್ ಆಗುತ್ತಾ ಇರಲಿ :)

ಹರೀಶ ಮಾಂಬಾಡಿ said...

ನಿಮ್ಮ ಡಿಪ್ರೆಶನ್ ಬಗ್ಗೆ ನನ್ನ ತಕರಾರಿಲ್ಲ. ಏಕೆಂದರೆ ಒಂಟಿತನ ಇಂಥದ್ದನ್ನೆಲ್ಲಾ ಆಲೋಚಿಸುವಂತೆ ಮಾಡುತ್ತದೆ. ಐದಾರು ವರ್ಷಗಳ ಹಿಂದೆ ಇಂಥದ್ದನ್ನು ನಾನೂ ಅನುಭವಿಸಿದ್ದೆ...
ಈಗ ಬರೆಯಿರಿ, ಬರೆಯುತ್ತಲೇ ಇರಿ...
ಬ್ಲಾಗ್ ಬಗ್ಗೆ ನೀವು ತಾನೇ ನಮಗೆಲ್ಲಾ ಪರಿಚಯ ಮಾಡಿದ್ದು?

KRISHNA said...

ಡಿಪ್ರೆಷನ್ ಕೆಲವರನ್ನ ಕೊಂದ್ರೆ, ಇನ್ನು ಕೆಲವರಲ್ಲಿ ಛಲ ಹುಟ್ಟಿಸುತ್ತೆ... ಆ ಹಠದಿಂದ ಆದ್ರೂ ಮುಂದೆ ಹೋಗ್ಲೇ ಬೇಕಲ್ವ? ನಾವು ಅಂದುಕೊಂಡ ಹಾಗೆ ಬದುಕು ಸಾಗಿಸೋ ಹಾಗಿದ್ರೆ ಜಗತ್ತಿನಲ್ಲಿ ಇಷ್ಟೊಂದು ಕತೆ, ಕಾದಂಬರಿ, ಕವನಗಳು ಬರ್ತಾನೇ ಇರ್ಲಿಲ್ಲ ಅಲ್ವ... ಎಲ್ಲ ಫ್ಲಾಟ್ ಆಗಿರ್ತಿತ್ತು...ಅಥವಾ ಜ್ಯೋತಿಷಿಗಳನ್ನು ಕೇಳಿ ಆರಾಮವಾಗಿ ಬದುಕಬಹುದಿತ್ತು.... ಸೋ, ಪರಿಸ್ಥಿತಿಗಳು ಏನಿದ್ರೂನೂ ಅನಿರೀಕ್ಷಿತಾನೇ... ಫೇಸ್ ಮಾಡ್ಲೆ ಬೇಕು...

Chevar said...

Venu,
ಖಂಡಿತ ಬ್ಲಾಗ್ ಮುಂದುಬರಿಯುತ್ತೆ.

Tejaswini,
ಬ್ಲಾಗ್ update ಆಗುತ್ತೆ. ನಿರಂತರ...

ಮಾಂಬಾಡಿ,
ಬರೀತಾ ಇರುತ್ತೀನಿ.

Krishna,
Life in general, nothing given me. The blog is updating irrespective of mood. soon u can get another post.

Viresh Math said...

veeresh math,
sir your language style is really verygood. so continue your work. tell me your feeligs. thank you sir.