Thursday, September 24, 2009

ಈ ಮಳೆಯಲ್ಲಿ ನಿಂತು ಊರ ಮಳೆ ನೆನಪು!

ಕೊನೆಗೂ ಕಳೆದ ಮೂರು ವರ್ಷಗಳಿಂದ ಇದ್ದ ಕೊರಗು ದೂರವಾಗಿದೆ. ಮಳೆ ನಿರೀಕ್ಷೆಗೂ ಮೀರಿ ನನ್ನನ್ನು ತೋಯಿಸಿದೆ. ಕಾರಣ ಇಷ್ಟೇ ಓಣಂ ಹೆಸರಲ್ಲಿ ರಜೆ ಪಡೆದು ನಮ್ಮೂರು ಕಾಸರಗೋಡು ಕಡೆ ಹೋಗಿದ್ದೆ. ಭರ್ಜರಿ ೮ ದಿನ ಊರಲ್ಲಿ ಕೆಲಸದ ಯಾವುದೇ ಗುಂಗೇ ಇಲ್ಲದೆ ಕಳೆದಿದ್ದೆ.

ಮಂಗಳೂರು ಬಿಟ್ಟ ಮೇಲೆ ಈ ಪರಿ ನನ್ನ ಮಳೆ ಕಾಡಿದ್ದು ಇದೇ ಮೊದಲ ಬಾರಿ. ಬೆಂಗಳೂರು ಎಂಬ ಕಾಂಕ್ರೀಟ್ ಕಾಡು ತನ್ನ ಹೆಸರಿನಂತೆಯೇ ಮಳೆ ಕಡೆ ಕಣ್ಣೆತ್ತಿಯೂ ನೋಡಲಿಲ್ಲ ಆರಂಭದಲ್ಲಿ. ಆದರೆ ಕಳೆದ ವಾರ ಎರಡು ಬಾರಿ ಮಳೆ ಬಂದು ಕೊರಗು ದೂರವಾಗಿದೆ. ಆದರೆ ಊರಲ್ಲಿ ಬಂದಂತಹ ಮಳೆ ಬೆಂಗಳೂರಲ್ಲಿ ಬರದೇ ಇದ್ದಿದ್ದು ಭಾರಿ ಒಳ್ಳೆಯದೇ ಆಯಿತು. ಯಾಕೆಂದರೆ ಬೆಂಗಳೂರಿನ ಮಳೆ ಮಹಿಮೆ ಬಗ್ಗೆ ಬರೆದು ಮುಗಿಯುವಂತದ್ದಲ್ಲ. ಅಲ್ಲಿ ಒಳ್ಳೆಯದನ್ನು ಬಿಟ್ಟು ಎಲ್ಲವೂ ಇರುತ್ತದೆ. ಅದು ಏನೇ ಇರಲಿ ಈಗ ಊರ ಮಳೆಯ ಹಾದಿಗೆ ಬರೋಣ.

ಬೆಂಗಳೂರಿನಿಂದ ಹೊರಟು ಹಾಸನ ತಲುಪುವಷ್ಟರಲ್ಲೇ ಮಳೆಯ ಹನಿಗಳ ಲೀಲೆ ಆರಂಭವಾಗಿತ್ತು. ಆದರೆ ಅದಾಗಲೇ ಕಣ್ಣೆಳೆಯುತ್ತಿತ್ತು ನಾನು ನಿದ್ರಾದೇವಿ ಪರವಶನಾಗಿದ್ದೆ. ಮತ್ತೆ ಕಣ್ತೆರೆದಾಗ ಬಸ್ ಬಿ.ಸಿ. ರೋಡ್ ಸಮೀಪದ ಮಾಣಿಯಲ್ಲಿತ್ತು. ಅಲ್ಲಿಯೂ ಅದಾಗಲೇ ಮಳೆ ನೀರು ನೆಲವ ತೋಯಿಸಿತ್ತು. ಮಂಗಳೂರಿಗೆ ತಲುಪಿದಾಗ ಹನಿಗಳ ರಭಸ ಜೋರಾಗಿತ್ತು. ಬಸ್ ಇಳಿದು ನಿಲ್ದಾಣ ತಲುಪಬೇಕಾದರೆ ನಾನು ಅರ್ಧಂಬಂರ್ಧ ಒದ್ದೆ ಒದ್ದೆ. ಊರಿಗೆ ತಲುಪಬೇಕಾದರೆ ಮಳೆ ನಿಂತಿತ್ತು. ಆದರೆ ತೋಡಿನಲ್ಲಿ ಹರಿಯುತ್ತಿದ್ದ ಕೆಸರು ನೀರು ತನ್ನ ವೇಗಕ್ಕೆ ಮಿತಿಯೊಡ್ಡಿ ನಿಧಾನವಾಗಿ ಹರಿಯುತ್ತಿತ್ತು. ಈ ಹಿಂದೆಯೇ ಹೇಳಿದಂತೆ ಮಳೆ ಬಂತೆಂದರೆ ನಮ್ಮ ಮನೆ ಜಲಾವೃತ. ಅದೇ ರೀತಿ ಗೇಟ್‌ನಲ್ಲಿ ನಿಂತು ಮನೆಯತ್ತ ನೋಡಿದರೆ ಮನೆ ಮುಂದೆ ಅಂಗಳದಲ್ಲಿ, ಎದುರುಗಡೆ ಇರುವ ಇರುವ ಕಣಿವೆಯಲ್ಲಿ ನೀರು ಹರಿಯಲು ಆರಂಭವಾಗಿತ್ತು. ಹಾಗೆ ಮಧ್ಯಾಹ್ನವಾಯಿತು. ಆಕಾಶ ಕಪ್ಪಡರಿತು. ಮತ್ತೆ ಸುರಿಯಲಾರಂಭಿಸಿತು ಧೋ ಎಂದು ಮಳೆ.
ಮಳೆಯ ಹನಿಗಳು ಅಂಗಳದಲ್ಲಿ ಬೀಳುವ ಶಬ್ದಗಳನ್ನು ಕಿವಿಯಲ್ಲಿ ಹಿಡಿದಿಡಲಾರಂಭಿಸಿದ್ದೆ. ಮಳೆರಾಯನಿಗೂ ಗೊತ್ತಾಗಿರಬೇಕು ನನ್ನ ಕುತೂಹಲ. ಹಾಗೆ ಬಿದ್ದ ಮಳೆಯನ್ನು ಗಂಟೆಗಳಲ್ಲಿ ಲೆಕ್ಕಹಾಕಿದರೆ ಸರಿಸುಮಾರು ಒಂದೂವರೆ ಗಂಟೆ.

ಹಾಗೆ ಒಂದು ಮಳೆ ಬಂದರೆ ನಮ್ಮ ಮನೆ ಜಲಾವೃತವಾಗಲು ಬೇಕಾಗುವುದು ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷ. ಮನೆಯ ಮುಂಭಾಗದಲ್ಲಿ, ಹಿಂಭಾಗದಲ್ಲಿ ನೀರು ಹರಿದುಹೋಗಲು ತೋಡು ಇದೆ. ಹೀಗೆ ಒಂದು ಮಳೆ ಬಂದರೆ ಎತ್ತರದ ಪ್ರದೇಶದಲ್ಲಿ ಒಂದೇ ಹಾದಿಯಲ್ಲಿ ಸೇರಿ ಹಳ್ಳ ಕೊಳ್ಳಗಳನ್ನು ದಾಟಿ ಬರಬೇಕು. ಹಾಗೆ ಬರುವ ವೇಳೆಗೆ ನೀರು ಗೇಟು ದಾಟಿ ನಮ್ಮ ಭೂಮಿಯಲ್ಲಿ ಬಂದು ಸೇರುತ್ತವೆ. ಹಾಗೇ ಅದು ನಿಧಾನವಾಗಿ ಪ್ರವಹಿಸುತ್ತಾ ಸಾಗಬೇಕು. ಅಂತಹ ಮಳೆ ನೀರನ್ನು ನೋಡಿ ಖುಷಿ ಪಟ್ಟ ದಿನಗಳೆಷ್ಟೋ. ನಂತರದ ನಾಲ್ಕು ದಿನಗಳಲ್ಲೂ ಮಳೆ ನಿಂತಿರಲಿಲ್ಲ. ಅದರಲ್ಲೂ ಮೂರನೇ ದಿನ ಸುರಿದಿದ್ದು ಭಾರೀ ಮಳೆ. ಮಳೆಯ ರಭಸಕ್ಕೆ ನೀರ ಹನಿಗಳು ವೇಗವಾಗಿ ಗಾಳಿಯ ಜತೆ ಮುಖಕ್ಕೆ ರಾಚುತ್ತಿದ್ದವು. ವಿದ್ಯಾಭ್ಯಾಸ ಪೂರೈಸಿದ ಪುತ್ತೂರು ಹಾಗೂ ಕೊಣಾಜೆಯಲ್ಲಿ ನಮ್ಮ ತರಗತಿ ನಡೆಯುತ್ತಿದ್ದುದು ಮೇಲ್ಮಹಡಿಯಲ್ಲಿ. ಅಲ್ಲಿ ಮೇಲ್ಗಡೆ ಸಿಮೆಂಟ್ ಹೊದಿಕೆ. ಜೋರಾಗಿ ಮಳೆ ಬಂದರೆ ಹನಿಗಳು ಜೋರಾಗಿ ಬಿದ್ದರೆ ತರಗತಿಯಲ್ಲಿ ಏನು ಪಾಠ ಮಾಡುತ್ತಿದ್ದಾರೆ ಎನ್ನುವುದೂ ತಿಳಿಯದಾಗುತ್ತದೆ. ಎಲ್ಲವೂ ಇಂದಿಗೆ ನೆನಪು ಮಾತ್ರ. ಆ ನಂತರದ ದಿನಗಳಲ್ಲಿ ಮಳೆ ಬಂದರೂ ಅದು ಹಿಂದೆ ಕಾಡಿದಷ್ಟು ತೀವ್ರವಾಗಿ ಕಾಡುತ್ತಿರಲಿಲ್ಲ. ಅಂತಹ ತೀವ್ರತೆಯ ಮಳೆ ಇನ್ನೊಂದು ಸಾರಿ ಜೀವನದಲ್ಲಿ ಬರಬೇಕು ಎಂಬ ಆಸೆ ಬೆಂಗಳೂರಲ್ಲಿರಬೇಕಾದರೆ ನಿಜವಾಗಿಯೂ ಮುರುಟಿಹೋಗಿತ್ತು. ಬೆಂಗಳೂರಲ್ಲಿ ಬಂದರೂ ಅದು ಅನಾಹುತಕ್ಕೆ ಕಾರಣವಾಗುತ್ತದೆಯೇ ಹೊರತು ಬೇರೆ ಏನೂ ಸಾಧಿಸಿದಂತಾಗುವುದಿಲ್ಲ.

ಹಾಗೆ ಎರಡು ಮಳೆಗೆ ಕೊಡೆಯೇ ಇಲ್ಲದೆ ನಡೆದಾಡಿದ್ದೆ ಊರಲ್ಲಿ. ಹಾಗೆ ಕಳೆದುಹೋದ ದಿನಗಳನ್ನು ಇಲ್ಲಿ ನಿಮ್ಮ ಮುಂದೆ ಸಾದರಪಡಿಸಲು ಸಮಯದ ಪರಿಧಿಯ ನನಗೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಸದ್ಯದ ಕೊರಗು. ಸದ್ಯ ಮಳೆಯ ಬಗ್ಗೆ ಇಷ್ಟು ಸಾಕು. ಇನ್ನೂ ಬರೆಯೋದಿದೆ ಸಾಕಷ್ಟು. ಸದ್ಯ ಒಂದು ಪುಟ್ಟ ವಿರಾಮ. ಕಲಿತ ಯುನಿವರ್ಸಿಟಿ, ಬೆಳೆದ ಊರು, ಒಂದರ್ಧ ದಿನದ ಪಿಕ್‌ನಿಕ್. ಇವುಗಳೆಲ್ಲವೂ ನಿಮ್ಮ ಮುಂದಿರಿಸಬೇಕು. ಅಷ್ಟರವರೆಗೆ ಇದನ್ನು ಓದಿಸಿಕೊಳ್ಳಿ.

Sunday, August 23, 2009

ಈ ರಜೆಯ ಮುಂಜಾವದಲಿ ಹೊರಡುತ್ತಿದ್ದೇವೆ...

ಇಂದು ಆಫೀಸ್‌ಗೆ ರಜೆ. ಅರ್ಥಾತ್ ನಾನು ಬೆಂಗಳೂರಲ್ಲಿ ಇರಬಾರದು! ಈ ನಿಯಮ ಸಿಂಪಲ್. ಕಚೇರಿಗೆ ಕ್ಲೋಸ್ಡ್ ಹಾಲಿಡೇ ಇದ್ದ ದಿನ ನಾನು ಯಾವ ಕಾರಣಕ್ಕೂ ಬೆಂಗಳೂರಲ್ಲಿ ಇರುವುದಿಲ್ಲ. ಅದು ಬೆಂಗಳೂರಿನ ಮೇಲಿನ ಸಿಟ್ಟಾ? ಇಲ್ಲಾ, ಅಷ್ಟೂ ದಿನಗಳಲ್ಲಿ ಇಲ್ಲಿ ಅನುಭವಿಸಿದ ಟ್ರಾಫಿಕ್ ಜಂಜಾಟವಾ? ನಿರ್ದಿಷ್ಟ ಕಾರಣವಂತೂ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಒಂದು ಫುಲ್ ಡೇ ಬೆಂಗಳೂರಲ್ಲಿ ಕಳೆಯಲು ನನಗೆ ಪ್ರಿಯ ಎನಿಸುವಂತಹ ಜಾಗ ಯಾವುದೂ ಇಲ್ಲ. ಮೊದಲು ಇಸ್ಕಾನ್ ನನ್ನ ರಮ್ಯ, ಭವ್ಯ ತಾಣವಾಗಿತ್ತು. ಆದರೆ ಬೆಂಗಳೂರು ನನಗೆ ಆಪ್ತವಾದಂತೆ (?) ಇಸ್ಕಾನ್ ನನಗೆ ಭಕ್ತಿಯ ಭಾವವನ್ನು ಸುರಿಸಲಿಲ್ಲ. ಹಾಗಂತ ಪ್ರೀತಿಯ ಕೃಷ್ಣನನ್ನು ನಾನು ದೂರ ಮಾಡಲಿಲ್ಲ. ಆತನ ಮೇಲಿನ ಭಕ್ತಿ ದೂರಾಗಲಿಲ್ಲ.
ಬೆಂಗಳೂರು ಎಂಬ ಜಾಗ ಎಲ್ಲರಿಗೂ ವೆಲ್‌ಕಮ್ ಎನ್ನುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿ ನಾನೂ ಒಬ್ಬನಾಗಿ ಇಲ್ಲಿ ಸೇರಿ ಹೋಗಿದ್ದೆ. ಬೆಂಗಳೂರಿಗೆ ಬಂದು ಕಳೆದ ಈ ಮೂರೂ ಕಾಲು ವರ್ಷದಲ್ಲಿ ಬೆಂಗಳೂರು ಬದಲಾಗಿದೆ. ಆದರೆ ನನ್ನ ಪಾಲಿಗೆ ನಾನು ಬದಲಾಗಲಿಲ್ಲ. ಕೆಲವರು ನೀನು ತುಂಬಾ ಬದಲಾಗಿದ್ದೀಯ ಎಂದು ದೂರಿದರೆ ಅದು ನನ್ನ ದೋಷವಲ್ಲ.
ಆರಂಭದ ಕೆಲದಿನಗಳನ್ನು ಬಿಟ್ಟರೆ ನಾನು ಹಾಗೂ ನನ್ನ ಜತೆ ಕೆಲಸ ಮಾಡುವ ಸಹೋದ್ಯೋಗಿಗಳು ಒಂದಲ್ಲ ಇನ್ನೊಂದು ಕಡೆಗೆ ಟ್ರಿಪ್ ಹೋಗಿ ಬರುತ್ತಿದ್ದೆವು. ಹಾಗೆ ಕಳೆದ ಬಾರಿ ಏಪ್ರಿಲ್ ತಿಂಗಳ ಯುಗಾದಿ ಸಂಭ್ರಮದಲ್ಲಿ ನಾವು ಮಂಜಿನ ನಗರಿ ಮಡಿಕೇರಿಯಲ್ಲಿದ್ದೆವು.
ಈ ಬಾರಿ ನಾವು ಎಲ್ಲವೂ ಅಂದುಕೊಂಡಂತೆಯೇ ಸಾಗಿದ್ದರೆ ನಾವು ಇಂದು ಮುಂಜಾನೆಯ ವೇಳೆ ಚೆನ್ನೈಯಲ್ಲಿ ಇರುತ್ತಿದ್ದೆವು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಚೆನ್ನೈ ಯಾತ್ರೆಯನ್ನು ರದ್ದುಗೊಳಿಸಬೇಕಾಯಿತು. ಹಾಗಂದಾಕ್ಷಣವೇ ನಾನು ಮತ್ತೆ ಮಡಿಕೇರಿ, ಕುಶಾಲ ನಗರದ ಕಡೆಗೆ ಏಕಾಂತ ಯಾತ್ರೆಯ ಸ್ಕೆಚ್ ಹಾಕಲಾರಂಭಿಸಿದ್ದೆ. ಅಂತಹ ಒಂದು ಏಕಾಂತದ ಯಾತ್ರೆ ಮಾಡಿ ಸುಮಾರು ವರ್ಷಗಳೇ ಕಳೆದಿದ್ದವು. ಅಂತಹ ಒಂದು ಏಕಾಂತ ಸದ್ಯಕ್ಕೆ ನನಗೆ ಅಗತ್ಯವಿದೆಯೇ ಎಂದು ಯೋಚಿಸಿದಾಗ ಅನಿವಾರ್ಯವಲ್ಲ, ಆದರೆ ಮಡಿಕೇರಿಗೆ ಹೋಗುವುದು ಮಾತ್ರ ನಿಶ್ಚಿತ ಎಂದು ಮನಸಲ್ಲಿ ಯೋಚಿಸಿದ್ದೆ ನೋಡಿ. ಆದರೆ ನಿನ್ನೆ ಕಚೇರಿಗೆ ಬಂದು ಎಲ್ಲರ ಜತೆ ಚರ್ಚಿಸಬೇಕಾದರೆ ಚೆನ್ನೈ ಇಲ್ಲದಿದ್ದರೂ ಪರವಾಗಿಲ್ಲ. ಬೆಂಗಳೂರ ಸುತ್ತು ಮುತ್ತಲ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಬೇಕು ಎನ್ನುವ ಪ್ಲಾನ್ ಹಾಕಲಾರಂಭಿಸಿದೆವು. ನಂದಿ ಹಿಲ್ಸ್, ಸಾವನ್‌ದುರ್ಗಾ ಈಗಾಗಲೇ ನಮ್ಮನ್ನು ಸ್ವಾಗತಿಸಿಯಾಗಿತ್ತು. ನಂತರ ಹೊಳೆದಿದ್ದು ಮೇಕೆದಾಟು. ಸದ್ಯ ಇಂದಿನ ಗಣೇಶ ಹಬ್ಬ ಮೇಕೆದಾಟುವಿನಲ್ಲಿ ನಿಗದಿಯಾಗಿದೆ. ಎರಡು ಬೈಕ್‌ಗಳಲ್ಲಿ ನಾಲ್ವರು ಹೊರಟಿದ್ದೇವೆ. ಇದು ಕೊನೆ ಕ್ಷಣದ ಬದಲಾವಣೆಯಾದರೂ ಬೆಂಗಳೂರೆಂಬ ಈ ಮಹಾನಗರಿಯಲ್ಲಿ ಇಂದಿನ ಫುಲ್ ಡೇ ಕಳೆದು ಹೋಗುವುದಿಲ್ಲ ಎನ್ನುವುದೇ ಸದ್ಯದ ಸಮಾಧಾನ. ಅದಕ್ಕೇ ಏನಿದ್ದರೂ ಇನ್ನು ಕೆಲವ ಘಂಟೆಗಳಲ್ಲಿ ಸಿದ್ಧಗೊಳ್ಳಬೇಕಿದೆ. ಬಂದ ನಂತರ ವಿವರವಾಗಿ ಸಾಗಿದ ದಾರಿ, ಕ್ರಮಿಸಿದ ದಾರಿಯ ಬಗ್ಗೆ ಬರೆದೇನು. ಅದುವರೆಗೆ ಕಾಯುತ್ತಿರಿ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಮತ್ತೆ ನಿಮ್ಮ ಮುಂದೆ ಶೀಘ್ರದಲ್ಲೇ ಬರ್ತೀನಿ.

Monday, August 03, 2009

ಧನ್ಯವಾದಗಳು ನಿಮಗೆ...

ಎಲ್ಲ ಸ್ನೇಹಿತ/ ಸ್ನೇಹಿತೆಯರಿಗೆ ಧನ್ಯವಾದಗಳು. ಯಾಕೆ ಎಂದು ಕೇಳುತ್ತೀರಿ ಎಂದಾದರೆ ಉತ್ತರ ಹಾಗೇ ಸುಮ್ಮನೆ!!! ಗೆಳೆಯರು, ಗೆಳತಿಯರು ಯಾರೂ ಒಂದು ಎಸ್‌ಎಂಎಸ್, ಒಂದು ಫೋನ್ ಕಾಲ್, ಒಂದು ಇ-ಮೇಲ್ ಯಾವುದನ್ನೂ ಕಳುಹಿಸದೇ ಉತ್ತಮ ಕಾರ್‍ಯವನ್ನು ಮಾಡಿದ್ದಾರೆ. ಎಲ್ಲರೂ ಅಭಿನಂದನಾರ್ಹರು. ಅದರ ಜತೆ ನಾನೂ ಯಾವುದೇ ರೀತಿ ಎಸ್‌ಎಂಎಸ್, ಕಾಲ್, ಇ-ಮೇಲ್ ಅಂತ ತಲೆಕೆಡಿಸಿಕೊಳ್ಳದೆ ನನಗೆ ತಿಳಿದಿರುವ ಗೆಳೆಯರನ್ನು ಹಾಗೇ ಸುಮ್ಮನೆ ಮನಸ್ಸಲ್ಲಿ ನೆನಪಿಸಿಕೊಂಡೆ. ನಿನ್ನೆ ಗೆಳೆತನದ ದಿನ ಮುಗಿದಿದೆ, ಆದರೆ ಗೆಳೆತನ ಇನ್ನೂ ನಿನ್ನೆಗೇ ಮುಗಿಯದೆ ಚಿರಂತನವಾಗಿ ಮುಂದುವರಿಯುತ್ತಾ ಸಾಗುತ್ತಿದೆ. ಈ ದಿನ ಕಳೆದ ನಂತರ ಬರೆಯೋಣ ಎನ್ನಿಸಿತು. ಅದಕ್ಕೆ ಇಂದು ಈ ಅಕ್ಷರ ಮಾಲೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

Don't walk in front of me,

I may not follow.

Don't walk behind me,

I may not lead.

Walk beside me and be my friend." - Albert camus

ನನ್ನ ಮುಂದಿನಿಂದ ನಡೆಯಬೇಡ, ನಾನು ನಿನ್ನನ್ನು ಹಿಂಬಾಲಿಸದೇ ಇರಬಹುದು. ನನ್ನ ಹಿಂಬಾಲಿಸಬೇಡ, ನಾನು ಮುನ್ನಡೆಸದೇ ಇರಬಹುದು. ನನ್ನ ಜತೆಯಾಗಿಯೇ ಹೆಜ್ಜೆ ಹಾಕುತ್ತಾ ನನ್ನ ಸ್ನೇಹಿತ, ಸ್ನೇಹಿತೆಯಾಗಿಯೇ ಇರು.

ಸ್ನೇಹಿತರ ದಿನದ ಬಗ್ಗೆ ಬರೆಯೋಣ ಎಂದು ಸುಮ್ಮನೆ ಇಂಟರ್‌ನೆಟ್ ಮುಂದೆ ಜಾಲಾಡುತ್ತಿದ್ದಾಗ ಕಾಣಿಸಿದ ಸುಂದರ ಸಾಲುಗಳಿವು. ಗೆಳೆತನದ ಬಗ್ಗೆ ಕೇವಲ ಕೆಲವೇ ಪದಗಳಲ್ಲಿ ಹೇಳಿದಂತಹ ಅದ್ಭುತ ಸಾಲುಗಳೆಂದು ನಿಮಗೂ ಅನಿಸಬಹುದು.
ಗೆಳೆತನದ ವಿಶೇಷ ದಿನ ನನಗೆಂದೂ ಆದ್ಯತೆಯಾಗಿರಲಿಲ್ಲ. ನನ್ನ ಗೆಳೆಯರು /ಗೆಳತಿಯರು ಎಂದೆಂದಿಗೂ ಮನದಲ್ಲಿ ಅಚ್ಚಳಿಯದೇ ಉಳಿಯುವಂತವರು.

ಅವರನ್ನು ನೆನಪಿಸಿಕೊಳ್ಳುವುದಕ್ಕೆ ವಿಶೇಷ ದಿನ ಎಂದಾದರೆ ಆ ದಿನ ಬಾರದಿದ್ದರೆ ಅವರ ನೆನಪಾಗುವುದಿಲ್ಲವೇ. ಹಾಗಾಗಬಾರದು, ನಮ್ಮ ಒಳಿತು ಕೆಡುಕುಗಳ ನಡುವೆ ನಮ್ಮ ಜತೆಗೆ ಇದ್ದುಕೊಂಡು, ದೂರ ಇದ್ದರೂ ಹಿತ ಹಾರೈಸಿಕೊಂಡು ಬಾಳುವಂತಹ ಒಂದು ಗೆಳೆತನ ಸಾಧ್ಯವಾಗಬೇಕು. ಆ ಸಾಧ್ಯವಾಗುವಿಕೆಗೆ ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಅದು ಬಿಟ್ಟು ನೀ ನನಗಿದ್ದರೆ ನಾ ನಿನಗೆ ಎಂಬಂತಹ ಮಾತು ಅಲ್ಲಿ ಕಾಣಿಸಲೇ ಬಾರದು.

ಆದರೆ ಇಂದು ನಾವು ಬ್ಯುಸಿ ಲೈಫ್, ಕೆಲಸದ ಒತ್ತಡ ಇತ್ಯಾದಿ ಕುಂಟು ನೆಪಗಳನ್ನು ಒಡ್ಡಿ ಒಂದು ಸಂಬಂಧವನ್ನು ಭದ್ರವಾಗಿಡಲು ಕಷ್ಟ ಪಡುತ್ತಿದ್ದೇವೆ. ಇದಕ್ಕೆ ಕಾರಣವೇನು ಎಂದು ಯೋಚಿಸುತ್ತಾ ಕುಳಿತರೆ ಹಲವು ಕಾರಣಗಳು ಹೊಳೆದೀತೇನೋ? ಆದರೆ ಒಂದು ಸುಂದರ ಸಂಬಂಧವನ್ನು ನೆನಪಿರಿಸಿಕೊಳ್ಳಲೂ ಅಸಾಧ್ಯವಾದಂತಹ ಅದೇನು ಕೆಲಸ ಇದೆಯೋ ಗೊತ್ತಾಗುತ್ತಿಲ್ಲ.

ಬಹುಶಃ ಗೆಳೆತನದ ಬಗ್ಗೆ ಹಿಂದೆಲ್ಲಾ ನಾವು ಇಷ್ಟೆಲ್ಲಾ ಯೋಚಿಸುತ್ತಿರಲಿಲ್ಲವೇನೋ? ನನಗೆ ಗೊತ್ತಿರುವಂತೆ ಫ್ರೆಂಡ್‌ಶಿಪ್ ಡೇ ನನಗೆ ಮೊದಲು ಎದುರಾಗಿದ್ದು ಪುತ್ತೂರಿನಲ್ಲಿ ಪದವಿ ತರಗತಿಯಲ್ಲಿದ್ದಾಗ. ಆಗೆಲ್ಲಾ ಅದು ಸಂಭ್ರಮ ಎನ್ನಲು ಕಾರಣವಾಗುತ್ತಿತ್ತು. ಆದರೆ ಅದರ ನಂತರದ ದಿನಗಳಲ್ಲಿ ಗೆಳೆತನದ ಬಗ್ಗೆ ವಿಶೇಷ ಗಮನಹರಿಸುತ್ತಿರಲಿಲ್ಲ. ಇದರರ್ಥ ಯಾರ ಜತೆಗೂ ಬೆರೆಯುತ್ತಿರಲಿಲ್ಲ ಎಂದಲ್ಲ. ಆದರೆ ಆ ದಿನ ಬಾರದಿದ್ದರೂ ನಾವು ಸ್ನೇಹಿತರೆಲ್ಲರೂ ಜತೆಯಾಗಿ ಕಾಲಕಳೆಯುತ್ತಿದ್ದವು.

ಒಂದು ಸೂಕ್ಷ್ಮ ಸಂಬಂಧ ಗೆಳೆತನವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವವರನ್ನು ಕಂಡರೆ ತೀವ್ರ ಸಂಕಟ ಪಡುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಒಂದು ಕಂಫೋರ್ಟ್ ಝೋನ್ ನಾನೇ ಮಾಡಿಕೊಟ್ಟು ಬಿಡುತ್ತೇನೆ. ಅದೆಲ್ಲವನ್ನೂ ಮೀರಿ ಗೆಳೆತನದಲ್ಲಿ ನಾನು ಸಾಗಿ ಬಂದಿದ್ದೇನೆ. ಇದ್ದ ಕೆಲವೇ ಕೆಲವು ಗೆಳೆಯರಲ್ಲಿ ಎಲ್ಲರೂ ಅವರಿಂದಾಗುವಷ್ಟು ರೀತಿಯಲ್ಲಿ ಸಂಭಾಳಿಸುತ್ತಾ ಸಾಗಿದ್ದಾರೆ ಎನ್ನುವ ಕಾರಣಕ್ಕೆ ಇಂದಿಗೂ ನಾನು ಅತಿ ಖುಷಿ ಪಡುತ್ತಿದ್ದೇನೆ.

ಗೆಳೆತನದ ಬಗ್ಗೆ ನಾನು ಅತಿ ಹೆಚ್ಚು ಇಷ್ಟಪಟ್ಟು ನೆನಪಲ್ಲಿ ಉಳಿಸಿಕೊಳ್ಳಲು ನೆರವು ನೀಡಿದ ಕೆಲವು ಇಂಗ್ಲಿಷ್ ಸಾಲುಗಳನ್ನು ಹಾಗೇ ನಿಮ್ಮ ಮುಂದೆ ಇರಿಸುತ್ತಿದ್ದೇನೆ. ನಿಮಗೆ ಇಷ್ಟವಾದೀತು ಎಂಬ ಭರವಸೆಯೊಂದಿಗೆ. ಈ ಸಾಲುಗಳು ನನ್ನ ಕೈಗೆ ಲಭಿಸಿ ಕೆಲ ವರ್ಷಗಳು ಕಳೆದವು. ಇತ್ತೀಚಿನ ದಿನಗಳಲ್ಲಿ ನಾನು ಅತ್ಯಂತ ಆಪ್ತವಾಗಿರಿಸಿಕೊಂಡಿದ್ದು ಈ ಸಾಲುಗಳನ್ನು. ಇದರ ಪ್ರತಿ ಸಾಲಿನಲ್ಲಿ ನನಗೆ ಗೋಚರಿಸುವ ಸತ್ಯಗಳು ಸದಾ ನನ್ನನ್ನು ಜಾಗೃತನನ್ನಾಗಿಯೇ ಇರಿಸಿದೆ. ಹಾಗೆ ಎಲ್ಲೋ ಎಂದು ಕಡೆ ಸಿಕ್ಕಿತು, ಅದನ್ನು ಇನ್ನೆಲ್ಲೋ ಒಂದು ಕಡೆ ಬಿಟ್ಟು ಬಿಡಬೇಕು ಎನ್ನುವಂತೆಯೂ ಇಲ್ಲ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡರೆ ಉತ್ತಮ ಎನಿಸಿದ ಕಾರಣಕ್ಕೆ ಈ ಸಾಲುಗಳು ನಿಮ್ಮ ಮುಂದಿವೆ.


“To You”

You wiped the tears
That fell not from my eyes
And saw the well
Build up in me
A fortress of stone
Become an unfeeling heart.
Your words, stupid
Wise and funny
Broke the barrier
I feel again
Shades of joy, anger,
Sorrow and all that
You make me laugh
You make me cry
you make me feel
Whole again
You make me be
Me again
Life is good
Because you are there
My friend, my confidante,
A support system
You are the best
I ever knew.


ಹ್ಯಾಪಿ ಫ್ರೆಂಡ್‌ಶಿಪ್ ಡೇ!!!
ಕೆಲವರು ಬೈದರು, ಇನ್ನು ಕೆಲವರು ಕೆಟ್ಟವನು ಎಂದರು, ಮತ್ತೆ ಕೆಲವರು ತರಲೆ, ಹಲವರು ದುಷ್ಟ, ಹೃದಯಕ್ಕೆ ಹತ್ತಿರವಾಗಿಸಿಕೊಳ್ಳದ ಎಂದರೆ ಇನ್ನೊಂದು ವರ್ಗದವರು ಸ್ವೀಟ್ ಎಂದರು. ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ. ಎಲ್ಲರೂ ಅವರವರು ನನ್ನಲ್ಲಿ ಕಂಡ ಒಳ್ಳೆಯ, ಕೆಟ್ಟದ್ದನ್ನು ಹೇಳಿದರು. ಇನ್ನು ಕೆಲವರಲ್ಲಿ ಅಳುಕಿತ್ತು. ಆದರೆ ಮೌನದಲ್ಲೇ ಅಥವಾ ನನ್ನ ಆಪ್ತರಾದವರಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಆ ಕೇಳುವ ಜೀವ ಒಂದೂ ಅಕ್ಷರ ಬಿಡದೆ ಜಗತ್ತು (ಅರ್ಥಾತ್ ನಿನ್ನ ಸುತ್ತುಮುತ್ತಲಿನವರು) ಏನು ಹೇಳುತ್ತೆ ಎನ್ನುವುದನ್ನು ಅತಿ ಮೃದುವಾಗಿ, ಅಷ್ಟೇ ಚೆನ್ನಾಗಿ ನಾಟುವಂತೆ ಹೇಳುತ್ತಿತ್ತು. ಆ ಕಾರಣಕ್ಕೆ ನನ್ನ ಧನ ಹಾಗೂ ಋಣಾತ್ಮಕ ಅಂಶಗಳನ್ನು ಪಟ್ಟಿ ಮಾಡಿ ತೋರಿಸಿ ಹೇಳುತ್ತಿತ್ತು. ನಾನು ಅದನ್ನು ಚಾಚೂ ತಪ್ಪದೆ ಆಲಿಸುತ್ತಿದ್ದೆ. ಆದರೆ ಕೆಲವರು ಒಂದು ಮಧುರ ಭಾಂದವ್ಯವನ್ನು ಅಳಿಸುವ ಯತ್ನ ಮಾಡಿದ್ದರು. ಆದರೆ ಅದು ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲೇ ಇಲ್ಲ ಎನ್ನುವುದೂ ಇಂದು ನನ್ನ ಮುಂದಿರುವ ವಾಸ್ತವ. ಒಬ್ಬ ಸಾಮಾನ್ಯ, ನನ್ನ ಗೆಳೆಯರು, ಹಿತೈಷಿಗಳು ಎನ್ನುವ ಕಾರಣಕ್ಕೆ ಕೇಳುಗನಾಗಿ ಎಲ್ಲವನ್ನೂ ಸ್ವಾಗತಿಸಿದ್ದೇನೆ. ಆ ಕಾರಣಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಿದ್ದೇನೆ.
ಈ ದೀರ್ಘ ಬರಹ ಮನಸಿಗೆ ಖುಷಿಯಾಗಿರಬಹುದು ಎಂದುಕೊಂಡಿದ್ದೇನೆ. ಗೆಳೆತನ ದಿನವೊಂದಕ್ಕೆ ಸೀಮಿತವಾಗದೇ ಮುಂದುವರಿಯಲಿ. ಸಿಗಲಿ, ಬಾಳಲಿ ಹೊಸ ಚಿಗುರು...!!!

Monday, July 27, 2009

ಎಲ್ಲಾ ಮಳೆ ಲೀಲೆ!!!

ಏನಾದರೂ ಬರೆಯಬೇಕು ಎಂದು ಕಳೆದ ಮೂರು ವಾರಗಳಿಂದ ಯೋಚಿಸುತ್ತಾ ಇದ್ದೇನೆ. ಆದರೆ ಏನೂ ಹೊಳೆಯುತ್ತಿಲ್ಲ. ಕಳೆದ ಐದಾರು ವರ್ಷಗಳಲ್ಲಿ ಈ ಥರಾ ಎಂದೂ ಆಗಿಲ್ಲ. ಏನು ಬರೆಯಲು ಕುಳಿತರೂ 10 ರಿಂದ 15 ನಿಮಿಷದೊಳಗೆ ಮುಗಿಯಬೇಕು. ಹೆಚ್ಚು ಎಂದರೆ 20 ನಿಮಿಷ ಮಾತ್ರ.
ಆದರೆ ಇಂದು ಹಾಗಾಗುತ್ತಿಲ್ಲ. ನಾನಿಂದು ಈ ಬ್ಲಾಗ್‌ನಲ್ಲಿ ಬರೆಯಬೇಕೆಂದರೆ ಭಾರಿ ಕಷ್ಟಪಡುತ್ತಿದ್ದೇನೆ. ಯಾಕೆ ಎಂದು ಇನ್ನೂ ತಿಳಿಯುತ್ತಿಲ್ಲ. ಈ ರೀತಿ ಈ ಹಿಂದೆ ಆಗದೇ ಇರುವ ಕಾರಣ ಇದಕ್ಕೆ ಇದೇ ಕಾರಣ ಎಂದು ನಾನು ಹೇಳುವ ಸ್ಥಿತಿಯಲ್ಲಿಯೂ ಇಲ್ಲ. ಒಟ್ಟಿನಲ್ಲಿ ಒಂದು ಮೂಡಿ ಸ್ವಭಾವ ಬರೆಯಲು ಕುಳಿತುಕೊಳ್ಳುವಾಗ ಆರಂಭವಾಗುತ್ತದೆ.
ಸದ್ಯ ವಿಶೇಷ ಏನೂ ಇಲ್ಲ. ಈ ಬೆಂಗಳೂರೆಂಬ ಕಾಂಕ್ರೀಟ್ ಕಾಡಿನಲ್ಲಿ ಮಳೆಯೂ ಇಲ್ಲ! ಊರಿಗೆ ಫೋನ್ ಮಾಡಿದರೆ ಮಳೆಯದೇ ಸುದ್ದಿ. ಮಳೆ ಬಂದು ಹಾಗಾಯಿತಂತೆ, ಹೀಗಾಯಿತಂತೆ ಈ ರೀತಿ ಮಳೆಯ ವರದಿಯನ್ನು ಎರಡು ದಿನಕ್ಕೊಮ್ಮೆ ಕೇಳುತ್ತಲೇ ಇರುತ್ತೇನೆ. ಆಗೆಲ್ಲಾ ರಜೆ ಹಾಕಿ ಊರಿಗೆ ಹೋಗಬೇಕು ಎನ್ನುವ ಭಾವ ಕಾಡುತ್ತದೆ. ಊರಲ್ಲಿದ್ದಿದ್ದರೆ ನಾನಾಗುತ್ತಿದ್ದೆ ಮಳೆಯಲ್ಲಿ ಒದ್ದೆ ಒದ್ದೆ!!!
ಮಳೆ ಬಂತೆಂದರೆ ಸಾಕು ನಮ್ಮ ಮನೆ ಪರಿಸರವೆಲ್ಲಾ ಜಲಾವೃತ. ಮನೆಯ ಒಳಗಡೆ ನೆಲದಡಿಯಿಂದ ನೀರಿನ ತೇವಾಂಶ ಬರಲು ಆರಂಭಿಸುತ್ತದೆ. ಮನೆಯ ಬಲಬದಿಯ ಎತ್ತರ ಪ್ರದೇಶದಲ್ಲಿರುವ ನೆರೆ ಮನೆಯವರ ಜಮೀನಿನಲ್ಲಿ ಒಂದು ಕೆರೆಯಿದೆ. ಆ ಕೆರೆಯಿಂದ ಮಳೆಗಾಲದಲ್ಲಿ ಹೊರಟ ನೀರು ನಮ್ಮ ಮನೆಯ ಮುಂದಿನಿಂದಲೇ ಸಾಗಬೇಕು. ಅಲ್ಲಿ ನೀರು ನಡೆದದ್ದೇ ಹಾದಿ, ನಾವ್ಯಾರೂ ಅದನ್ನು ಕಟ್ಟಿ ಹಾಕಲು ಹೋಗುವುದೇ ಇಲ್ಲ. ಕಟ್ಟಿ ಹಾಕಿದರೂ ಜೋರಾದ ಒಂದು ಮಳೆ ಬಂದರೆ ಸಾಕು. ಮತ್ತೆ ನಮ್ಮ ಕಾಂಪೌಂಡ್ ತುಂಬಾ ನೀರು ನೀರು ನೀರು. ಹಾಗಂತ ಆ ನೀರು ನಮಗೆ ಯಾವತ್ತೂ ಒಂದು ಹೊರೆ ಅನ್ನಿಸಿಲ್ಲ. ಅಂತಹ ಮಳೆಗಾಲ ಪೂರ್ತಿ ಊರಲ್ಲಿದ್ದು ಎಷ್ಟು ವರ್ಷವಾಯಿತೋ...?
ಪ್ರತಿವರ್ಷದಂತೆ ಈ ಬಾರಿಯೂ ಮಳೆ ಕಾರುಬಾರು ಈಗಲೂ ಜೋರು. ಕೆಲವರು ಮಳೆಯದು ತೀರಾ ಅತಿಯಾಯಿತು ಎನಿಸಿದಾಗ ಛೇ, ಈ ಮಳೆ ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ ಎದು ದೂರುತ್ತಾರೆಯೇ ವಿನಾ ಮಳೆ ನಿಲ್ಲಲಿ ಎಂದು ಬಯಸುವುದೇ ಇಲ್ಲ.
ಆದರೆ, ಇಲ್ಲಿ ಈ ಕಾಂಕ್ರೀಟ್ ಕಾಡಿನಲ್ಲಿ ಮಳೆ ಎಂದರೆ ನರಕ ಸದೃಶವಾಗುತ್ತದೆ. ಕಚೇರಿಯ ಒಳಗಿನಿಂದ ಕುಳಿತು, ರೂಮ್‌ನ ಒಳಗೆ ಕುಳಿತು ಮಳೆ ಹನಿಯನ್ನು ನೋಡಲು ಬಯಸುತ್ತೇನೆಯೇ ಹೊರತು ಈ ಮಳೆಯಲ್ಲಿ ನೆನೆಯಬೇಕು, ಮಳೆಯಲ್ಲಿ ನೆನೆಯುತ್ತಾ ಒಂದಿಡೀ ದಿನ ಕಳೆಯಬೇಕು ಎಂದು ಕಾಣಿಸುವುದೇ ಇಲ್ಲ.
ಸರಿಯಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು, ಇಲ್ಲಿನ ಸಮಸ್ತ ಚರಂಡಿಗಳೂ ನಮ್ಮನ್ನು ಹೊಲಸು ಮಾಡಿ ಹಾಕುತ್ತವೆ. ಚರಂಡಿಯ ತ್ಯಾಜ್ಯ ನನ್ನನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಆದರೆ ಇದೇ ಮಳೆಗೆ ಊರಲ್ಲಿದಿದ್ದರೆ ಎಂಬ ಭಾವ ಕಾಡುತ್ತೆ. ಹಾಗೆ ಊರ ಮಳೆ ಬಿಟ್ಟರೆ ಮತ್ತೆ ಮೂರು ವರ್ಷ ಪುತ್ತೂರಲ್ಲಿ, ಆ ಬಳಿಕ ಎರಡು ವರ್ಷ ಮಂಗಳೂರಲ್ಲಿ ಮಳೆಯದ್ದೇ ಕಾರ್ಬಾರು. ದಕ್ಷಿಣ ಕನ್ನಡದ ಮಟ್ಟಿಗೆ ಮಳೆ ಎಂದಿಗೂ ಮೋಸ ಮಾಡಿಲ್ಲ. ಅದು ಬಿಟ್ಟರೆ ನಾನು ಮಳೆಯನ್ನು ಅತ್ಯಂತ ಇಷ್ಟಪಡುವುದು ನನ್ನ ಸಂಬಂಧಿಕರಿರುವ ಬೇಕಲ ಕೋಟೆ ಸಮೀಪದ ತ್ರಿಕ್ಕನ್ನಾಡ್ ಎಂಬ ಸ್ಥಳ. ರಸ್ತೆಯ ಒಂದು ಬದಿ ಶಿವ ದೇವಸ್ಥಾನ. ರಸ್ತೆ ದಾಟಿದರೆ ಸಮುದ್ರ ತೀರ. ಮಧ್ಯೆ ಹಾದು ಹೋಗುವುದು ಕಾಸರಗೋಡು- ಕಾಂಞಂಗಾಡ್ ಹೆದ್ದಾರಿ. ಸಂಜೆಯ ಸೂರ್ಯಾಸ್ತಮಾನಕ್ಕೆ ಹೇಳಿ ಮಾಡಿಸಿದ ಸ್ಥಳ. ಹಾಗೆ ಅಲ್ಲಿನ ಮರಳದಂಡೆಯಲ್ಲಿ ನಿಂತು ಅದೆಷ್ಟು ಸಂಜೆಯನ್ನು ಕಳೆದೆನೋ ಅದೆಷ್ಟು ಹೊತ್ತು ಅತ್ತೆ ಮಗಳ ಜತೆ ಕಾಲ ಕಳೆದೆನೋ. ಅದೆಷ್ಟು ಬಾರಿ ಅವಳನ್ನು ಸಮಾಧಾನ ಪಡಿಸಿದೆನೋ? ಅದೆಷ್ಟು ಬಾರ ಬಾರಿ ಅವಳು ನನ್ನಲ್ಲಿ ಗೋಗರೆದಳೋ? (ಅತ್ತೆ ಮಗಳು ಎಂದಾಕ್ಷಣ ಏನೇನೋ ಯೋಚನೆ ಬೇಡ)
ಹಾಗೆ ಅಲ್ಲಿ ಮಳೆ ಜೋರಾಗಿ ಸುರಿದರೆ ಸಮುದ್ರದ ಅಲೆಗಳು ರಸ್ತೆ ದಾಟಿ ಬರುತ್ತದೆ. ರಸ್ತೆ ನೀರಲ್ಲಿ ಮುಳುಗಡೆ ರಸ್ತೆ ಸ್ವಲ್ಪ ಎತ್ತರದಲ್ಲಿದೆ. ಹಾಗೆ ರಸ್ತೆ ದಾಟಿದ ನೀರು ಮತ್ತೆ ರಸ್ತೆಯ ಈಚೆಗೆ ಬಂದು ಸೇರುತ್ತದೆ. ಹಾಗೆ ಅಲ್ಲೆಲ್ಲಾ ನೀರುನೀರು. ಸಮುದ್ರದ ಉಪ್ಪು ನೀರಲ್ಲಿ ಮನೆಯೊಳಗೆ ಕೂತರೆ ಏನೋ ಒಂಥರಾ. ಕಾಲುಗಳು ಉಪ್ಪಿನ ಅಂಶದಿಂದ ಅಂಟು ಅಂಟು. ಹಾಗೆ ಅಲ್ಲಿ ಮಳೆ ಸುರಿಯುತ್ತಾ ಇರುತ್ತೆ.
ಇಂತಹ ಹಲವು ಕತೆಗಳು ಕಣ್ಣ ಮುಂದೆ ಕಟ್ಟುತ್ತಾ ಹೋಗುತ್ತವೆ. ಕೆಲವು ಜೀವಂತ ಕತೆಗಳು. ಕೆಲವು ಕೇವಲ ನನಗೆ ಮಾತ್ರ ತಿಳಿದಿದ್ದು, ಕೆಲವರು ತಿಳಿಯಲು ಪ್ರಯತ್ನಿಸಿದ್ದು. ಆದರೂ ನಾನು ಬಾಯ್ಬಿಡದೇ ಇದ್ದಿದ್ದು. ಕೆಲವರು ನನಗೆ ತಿಳಿಯಲೇ ಬಾರದು ಎಂದು ಎಷ್ಟು ಪ್ರಯತ್ನಿಸಿದರೂ ಮುಚ್ಚಿಡಲಾಗದ ಎಲ್ಲಾ ರಹಸ್ಯಗಳು ಅವುಗಳಾಗಿಯೇ ಹೊರ ಬೀಳುತ್ತವೆ. ಯಾರು ಮುಚ್ಚಿಡಲು ಪ್ರಯತ್ನಿಸಿದ್ದರೋ ಅವರಾಗಿಯೇ ಎಲ್ಲವನ್ನು ಬಾಯಿ ಬಿಟ್ಟು ಹೇಳುತ್ತಾರೆ. ಕೇಳುಗ ನಾನು ಮೊದಲೇ ಗೊತ್ತಿದ್ದರೂ ಯಾವುದನ್ನೂ ತೋರ್ಪಡಿಸಿದೆ ಮತ್ತೂ ಅತ್ಯುತ್ತಮ ಎಂಬ ಕೇಳುಗನಾಗುತ್ತೇನೆ. ಅದೇ ಕಾರಣಕ್ಕೆ ಎಲ್ಲರೂ ಬಯ್ಯುತ್ತಾರೆ. ಜೀವನದಲ್ಲಿ ಇಷ್ಟೆಲ್ಲಾ ತಾಳ್ಮೆ ಇಟ್ಟುಕೊಳ್ಳಬಾರದು. ಮುಂದೆ ನಿನಗೆ ತೊಂದರೆಯಾಗುತ್ತದೆ ಎನ್ನುತ್ತಾರೆ. ನಾನು ಅದನ್ನು ಒಂದು ನಗುವಿನೊಂದಿಗೆ ಸ್ವೀಕರಿಸುತ್ತಾ ಇರುತ್ತೇನೆ. ಹೇಳುವವರು ಹೇಳುತ್ತಲೇ ಇರುತ್ತಾರೆ. ನಾನು ಕೇಳುತ್ತಲೇ ಇರುತ್ತೇನೆ. ಯಾರಿಗೊತ್ತು ಮುಂದೊಂದು ದಿನ ಅವರು ಹೇಳಿದ್ದು ನಿಜವಾಗುತ್ತದೋ ಗೊತ್ತಿಲ್ಲ. ಆದರೆ ಒಂದು ಸಂಬಂಧವನ್ನು ವಿನಾಕಾರಣ ಕೊಂದು ಸಾಗುವ ಮನಸು ಇನ್ನೂ ಸಾಧ್ಯವಾಗಿಲ್ಲ. ಹಾಗೊಂದು ದಿನ ಜೀವನದಲ್ಲಿ ಆರಂಭವಾದರೆ ಅಲ್ಲಿ ನಾನು ನಾನಾಗಿರುವುದಿಲ್ಲ. ಮಳೆ ಸುಖವಾಗಿರುವುದಿಲ್ಲ. ತುಂತುರು ಮಳೆ ಹಾನಿಯೂ ಕಿರಿಕಿರಿಯಾಗುತ್ತೆ. ಈ ರೀತಿ ಸುದೀರ್ಘವಾದ ಕತೆ ಹೇಳುವುದು ಸಾಧ್ಯವಾಗುವುದೂ ಇಲ್ಲ. ಮಳೆ ಕತೆ ಹೇಳಲು ಆರಂಭಿಸಿ ಜೀವನದ ಕತೆ ಆರಂಭವಾಗಿದೆಯಲ್ಲಾ. ತಪ್ಪು ನನ್ನದಲ್ಲ ಕಣ್ರೀ. ಬೆಂಗಳೂರಿನ ಮಳೆಯದು. ಊರಲ್ಲಿ ಬಂದ ಮಳೆ ಇಲ್ಲಿಯೂ ಬಂದಿದ್ದರೆ ನಾನು ಇಷ್ಟೆಲ್ಲಾ ಬರೆಯುವುದಿತ್ತಾ? ನಿಮಗೆ ಏನಾದರೂ ಆಕ್ಷೇಪಗಳಿದ್ದರೆ ನನ್ನ ಮೇಲೆ ಹೊರಿಸಬೇಡಿ. ಎಲ್ಲಾ ಮಳೆ ಲೀಲೆ!!!

Wednesday, June 24, 2009

24 ಕ್ಕೆ ವಂದನೆ, 25 ಕ್ಕೆ ಪಾದಾರ್ಪಣೆ

ಇಂದಿಗೆ 25 ವರ್ಷಕ್ಕೆ ಪಾದಾರ್ಪಣೆ. ಅರ್ಥಾತ್ ಎಲ್ಲರೂ ಹೇಳುವಂತೆ ರಜತ ಸಂಭ್ರಮದ ಕಾಲ. ಆದರೆ ನನ್ನ ಪಾಲಿಗೆ ಇದು ಜಸ್ಟ್ ಎನದರ್ ಡೇ. ಸಂಭ್ರಮಿಸುವ ಘಳಿಗೆ ಇನ್ನೂ ಕೂಡಿ ಬಂದಿಲ್ಲ. ಈ ದಿನವನ್ನು ಆಚರಿಸಿದರೆ ಅದು ವಿಶೇಷ ಎನ್ನುವುದು ಏನೂ ಸಂಭವಿಸುವುದಿಲ್ಲ ಎಂದೂ ಗೊತ್ತು. ಹಾಗಂತ ಅದು ವೈರಾಗ್ಯವಲ್ಲ. ಹುಟ್ಟು ಸಾವಿನ ನಡುವಣ ಹಾದಿಯಲ್ಲಿ ಕಳೆಯುವ ೩೬೫ ದಿನಕ್ಕೊಂದರಂತೆ ಒಂದಂಕಿ ಏರಿಕೆ ಮಾತ್ರ.

ಹಿಂದೊಂದು ಕಾಲವಿತ್ತು. ಜೂ.24 ಅಂದರೆ ಸಾಕು ಅದು ಸಂಭ್ರಮದ ಕ್ಷಣ. ಪ್ರತಿ ವರ್ಷವೂ ಜೂನ್ 24 ಅಂದರೆ ದೊಡ್ಡಮ್ಮನ ಕೊಡುಗೆಗಳದ್ದೇ ಕಾರ್ಬಾರು. ಅಂತಹ ಒಂದು ಗಿಫ್ಟ್ ಕೊಡುತ್ತಿದ್ದರು. ಆದರೆ ಯಾವಾಗ ಎಸ್‌ಎಸ್‌ಎಲ್‌ಸಿ ಮುಗಿಯಿತೋ ಅಲ್ಲಿಗೆ ಸಂಭ್ರಮ ಕ್ಷೀಣಿಸಲಾರಂಭಿಸಿತು. ಆ ನಂತರದ ದಿನಗಳಲ್ಲಿ ಪಿಯುಸಿಯಲ್ಲಿ ಕೆಲವರ ಒತ್ತಾಯಕ್ಕೆ, ಪದವಿ ಕಲಿಯುವ ದಿನಗಳಲ್ಲಿ ಪತ್ರಿಕೋದ್ಯಮದ ಹಾದಿ ತೋರಿಸಿಕೊಟ್ಟ ಗೆಳತಿಯ ಒತ್ತಾಸೆಗೆ, ವಿಶ್ವವಿದ್ಯಾನಿಲಯದಲ್ಲಿ ಜೀವದ ಗೆಳತಿಯ ಮುಖದಲ್ಲಿ ಒಂದು ಮಂದಹಾಸವನ್ನು ಕಾಣಲಿಕ್ಕೆ ಬರ್ತ್‌ಡೇ ಇತ್ತು. ಅದಕ್ಕೆ ಅವರು ಟ್ರೀಟ್ ಹೆಸರಲ್ಲಿ ಅಸಲು ಬಡ್ಡಿ ಎರಡನ್ನೂ ಸ್ವೀಕರಿಸುತ್ತಿದ್ದರು ಎನ್ನುವುದೂ ಅಷ್ಟೇ ವಾಸ್ತವ!!!
ಬಹುಶಃ ಇಂತಹ ಕೆಲವು ಸಂಭ್ರಮ ಮತ್ತು ಹಲವರ ಪ್ರಯತ್ನಗಳಿಂದಾಗಿ ಇಂದು ನಾನು ನಾನಾಗಿದ್ದೇನೆ. ಇಲ್ಲದಿದ್ದರೆ ಎಲ್ಲಿ ಕಳೆದು ಹೋಗುತ್ತಿದ್ದೆನೋ ಏನೋ?
ಕಳೆದ 25 ವರ್ಷಗಳಲ್ಲಿ ಏನೆಲ್ಲಾ ಗಳಿಸಿದೆ, ಏನು ನಷ್ಟವಾಯಿತು ಎನ್ನುವುದಕ್ಕಿಂತ ಎಲ್ಲರೂ ನನ್ನ ಸಂತಸಕ್ಕೆ ಅವರ ಪಾಲಿನಿಂದ ಕೆಲವನ್ನು ನನಗೆ ಕೊಟ್ಟರು. ಆ ಕಾರಣಕ್ಕಾಗಿ ನಾನು ಎಲ್ಲರಿಗೂ ಆಭಾರಿ. ಈ 25 ರ ಸಂಭ್ರಮ ಮುಗಿವ ವೇಳೆಗೆ ಯಾರು ಏನಾಗಿರುತ್ತಾರೋ ಯಾರಿಗೆ ಗೊತ್ತು. ಆ ಸಂದರ್ಭ ಅರ್ಥಾತ್ ಮುಂದಿನ ಜೂ. 24ವೇಳೆಗೆ ನಿಮ್ಮ ಮುಂದೆ ನನ್ನ ಬಗೆಗಿನ ಎಲ್ಲವನ್ನೂ ಬ್ಲಾಗ್ ಅಂಗಣದಲ್ಲಿ ಸುಮ್ಮನೆ ಇಡಬೇಕು ಎನ್ನುವ ಆಶಯವಿದೆ. ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತೀನಿ ಎನ್ನುವುದರ ಬಗ್ಗೆ ನನಗೂ ಸಂದೇಹವಿದೆ.
ಕಳೆದು ಹೋದ 24 ವರ್ಷಗಳು ಬದುಕಿನಲ್ಲಿ ಅದರದ್ದೇ ಆದ ಪಾಠ ಕಲಿಸಿತು.ಬಾಲ್ಯ, ಶಾಲೆ, ಕಾಲೇಜು, ಉದ್ಯೋಗ, ಮುಂದೆ.....?
ಏನೇ ಇರಲಿ ನನ್ನ ಸುಖ, ದುಃಖ, ನೋವು ನಲಿವು, ಕೋಪ ತಾಪ ಎಲ್ಲವನ್ನೂ ಸಹಿಸಿ, ನನ್ನ ಜತೆಗೇ ಇದ್ದು, ದೂರ ಇದ್ದರೂ ಸದಾ ಹಿತಾಶಯವನ್ನೇ ಬಯಸುವ, ಸಮೀಪವಿದ್ದರೂ ಹಾರೈಕೆಗಳಿಂದಲೇ ಶುಭ ಕೋರುವ, ಜೀವನದ ಅವಿಭಾಜ್ಯ ಅಂಗ ಎಂದೇ ಪರಿಗಣಿಸಲ್ಪಟ್ಟ ಕುಟುಂಬದ ಎಲ್ಲ ಸದಸ್ಯರಿಗೂ 24ರ ಅಂತ್ಯದಲ್ಲಿ 25 ರ ಪಾದಾರ್ಪಣೆ ಸಮಯದಲ್ಲಿ ಒಲವು ತುಂಬಿದ ಥ್ಯಾಂಕ್ಸ್.

ನೀವಿರಲು ಜತೆಯಲ್ಲಿ ಬಾಳೆಲ್ಲ ಹಸಿರಾದಂತೆ...
ನಗುತ ನೀವು ಕರೆದರೆ ಮನದಿ ಸಂತೋಷ ಹಾಡಾದಂತೆ...

Wednesday, May 06, 2009

ಗೆಳತಿಯ ಆತ್ಮಸಖಿಗೆ ಶುಭ್ ವಿವಾಹ್!

ಮುದ್ದು ಗೆಳತಿಗೆ,
ನಿನ್ನ ಆತ್ಮ ಸಖಿಗೆ ಪಾಣಿಗ್ರಹಣ ವಿಷಯ ತಿಳಿದು ಸಂತೋಷವಾಯಿತು. ಅದರ ಜತೆಗೆ ನೀನು ಎಂದೋ ಅವಳ ಬಗ್ಗೆ ಹೇಳಿದಾಗ ಕೇಳಿದ್ದ ವಿಷಯಗಳೆಲ್ಲಾ ನೆನಪಿಗೆ ಬಂದು ಮನವ ಕಾಡಿ ಭಾವ ಸಾಂದ್ರವಾಗಿಸಿತು. ಅವಳಿಗೆ ನನ್ನ ಪರಿಚಯವಿಲ್ಲದಿದ್ದರೂ ನೀನು ಹೇಳಿ ಅವಳಿಗೆ ನನ್ನ ಪರಿಚಯವಿದೆ ಎಂದು ತಿಳಿದುಕೊಂಡಿದ್ದೇನೆ. ಅದೇ ಕಾರಣಕ್ಕೆ ಸುಮ್ಮನೆ ಒಂದು ಬಾರಿ ಎಲ್ಲವನ್ನೂ ಮೆಲುಕು ಹಾಕುವ ಯತ್ನವನ್ನು ಮಾಡುತ್ತಿದ್ದೇನೆ.

ನಾವು ಆಗಷ್ಟೇ ಕಾಲೇಜು ಸೇರಿದ್ದೆವು. ಯಾರ ಪೂರ್ವಾಪರದ ಬಗ್ಗೆಯೂ ಯಾರಿಗೂ ಅರಿವಿರಲಿಲ್ಲ. ಕಾಲೇಜು ಸೇರಿ ಸುಮಾರು ಮೂರ್ನಾಲ್ಕು ತಿಂಗಳು ಕಳೆದ ನಂತರವೇ ನಾವು ಚಿರಪರಿಚಿತರಾದೆವು. ಅಂದಿನಿಂದ ನೀನು ಎಲ್ಲಾ ಪೂರ್ವಾಪರಗಳನ್ನೂ ಹೇಳುತ್ತಾ ಹೋದೆ.

ಇವುಗಳ ನಡುವೆ ನನಗೆ ನಿನ್ನಲ್ಲಿ ಇಷ್ಟವಾಗಿ ಕಾಡಿದ್ದು ಒಬ್ಬಳು ಆಸ್ಟ್ರೇಲಿಯಾದಲ್ಲಿರುವ ಹುಡುಗಿ, ಇನ್ನೊಬ್ಬಳು ಈ ಮದುವಣಗಿತ್ತಿ. ವಿಜೇಯ ಬಗ್ಗೆ ಇನ್ನೆಂದಾದರೂ ವಿವರವಾಗಿ ಬರೆದೇನು. ಮದುವಣಗಿತ್ತಿಯ ಬಗ್ಗೆ ನೀನು ಸಂಪೂರ್ಣವಾಗಿ ಹೆಳಿದ್ದು ನಾನು ನಿನ್ನ ಮನೆಗೆ ಬಂದಿದ್ದಾಗ. ಅದಕ್ಕಿಂತ ಮೊದಲು ಈ ಹೆಸರಿನ ಹುಡುಗಿ ಇದ್ದಾಳೆ ಎನ್ನುವುದು ತಿಳಿದಿತ್ತೇ ಹೊರತು ಅವಳ ಬಗ್ಗೆ ನೀ ಹೆಚ್ಚು ಬಾಯಿ ಬಿಟ್ಟಿರಲಿಲ್ಲ ಎನ್ನುವುದೇ ಸೂಕ್ತವಾದೀತೇನೋ?
ಆದರೆ ಅದೊಂದು ದಿನ ನಾನು ನಿನ್ನೂರಿಗೆ ಬಂದಿದ್ದೆ. ನಿನ್ನಲ್ಲಿ ಕೊಟ್ಟ ಮಾತಿಗೆ ಈತ ತಪ್ಪಲಿಲ್ಲ ಎನ್ನುವ ಸಂಭ್ರಮವಿತ್ತು. ನಿನಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತೋರಿಸುವ ಮತ್ತು ಹೇಳುವ ಉನ್ಮಾದವಿತ್ತು. ನನಗೆ ಅದೆಲ್ಲವನ್ನೂ ಕಿವಿಗೆ ತುಂಬಿಕೊಳ್ಳುವ ಕಾತರವಿತ್ತು. ಹಾಗೆ ಅಂದು ಅಪ್ಪ ನಮ್ಮಿಬ್ಬರನ್ನು ನಿನ್ನ ಕಾಲೇಜು ಬಳಿ ಬಿಟ್ಟಾಗ ಮಧ್ಯಾಹ್ನ ಸೂರ್‍ಯ ನೆತ್ತಿ ಮೇಲೇರುವ ಸಮಯ.
ಬಾರೋ ನಿನಗೆ ನನ್ನ ಕ್ಲಾಸ್ ತೋರಿಸ್ತೀನಿ ಎಂದು ನೀ ಕಲಿತ ತರಗತಿಯೊಳಗೆ ಕೊಂಡೊಯ್ದೆ. ಅಲ್ಲಿ ಒಂದೆಡೆ ನೀನು, ಇನ್ನೊಂದೆಡೆ ಮದುವಣಗಿತ್ತಿ, ಮತ್ತೊಂದು ಕಡೆ ನಿನ್ನ ಹಾಸ್ಟೆಲ್‌ಮೇಟ್ ಎಲ್ಲೆಲ್ಲಿ ಕುಳಿತುಕೊಂಡು ಏನೇನು ಕಿತಾಪತಿ ಮಾಡುತ್ತಿದ್ದೀರಿ ಎನ್ನುವುದನ್ನು ವಿವರವಾಗಿ ಹೇಳುತ್ತಾ ಹೋದೆ, ನಾ ಕೇಳುತ್ತಾ ಹೋದೆ. ಕ್ಲಾಸಲ್ಲಿ ಲೆಕ್ಚರರ್‌ಗೆ ಹೊಡೆಯುತ್ತಿದ್ದ ಲೈನ್, ಹೊಡೆಯುತ್ತಿದ್ದ ಶಿಳ್ಳೆ ಇತ್ಯಾದಿ ನಿಮ್ಮಿಬ್ಬರ ಮಸುಕು ನೆನಪಿನ ತೇರನೆಳೆದು ಮತ್ತೆ ಸಂಭ್ರಮಿಸಿದ್ದೆ.:-)
ಆನಂತರ ನಾವು ಶಾಲೆಯ ಬಳಿ ಹೋಗಿ ಅಲ್ಲಿ ಮಣ್ಣಿನಲ್ಲೇ ಕುಳಿತಿದ್ದು ನೆನಪಿದೆಯಾ? ಅಲ್ಲಿನ ಮರಗಳ ನಡುವಣ ಗುಡ್ಡವನ್ನು ತೋರಿಸಿ ನೋಡು ಇಲ್ಲೇ ನಾವಿಬ್ಬರೂ ಆಟವಾಡುತ್ತಾ ಇದ್ದಿದ್ದು. ನಾವು ಮಾಡದ ತಂಟೆಗಳಿಲ್ಲ ಎಂದು ಹೇಳಿದ್ದೆ. ಹಾಗೇ ಇನ್ನೂ ಏನೇನೋ ವಿಷಯಗಳನ್ನು ಅವಳ ಬಗ್ಗೆ ವಿವರವಾಗಿ ಹೇಳಿದ್ದೆ. ಆನಂತರ ಮನೆಗೆ ವಾಪಸಾಗಬೇಕಾದರೆ ಮನೆಗೆ ಬರುವ ಯಾವುದೋ ಕ್ರಾಸ್‌ನಲ್ಲಿ ನಿಲ್ಲಿಸಿ,ಇಲ್ಲಿ ನಾವು ಐಸ್‌ಕ್ರೀಂ ತಿನ್ನುತ್ತಾ ಇದ್ವಿ ಎಂದಿದ್ದೆ. ಆ ಬಾಲ್ಯದ ದಿನಗಳೆಲ್ಲಾ ನಿನ್ನ ಗೆಳತಿಯ ಹೆಸರಲ್ಲಿ ನಿನ್ನನ್ನು ಬಹುವಾಗಿ ಕಾಡುತ್ತೆ. ಅವಳು ನೀನು ಮಾಡುತ್ತಿದ್ದ ಕಿತಾಪತಿ, ಮನೆಗೆ ಬಂದರೆ ಅಮ್ಮನ ಮಧ್ಯಸ್ಥಿಕೆ, ನಿನ್ನ ತಂಟೆ, ಗೆಳತಿಯ ಜತೆಗಿನ ಜಗಳ ಇತ್ಯಾದಿ ಇತ್ಯಾದಿ... ನೀನು ಗೆಳತಿಯ ಬಗ್ಗೆ ಹೇಳಿದ ಎಲ್ಲಾ ಮಾತುಗಳನ್ನು ಬರೆಯಲು ಹೊರಟರೆ ಅದುವೇ ಒಂದು ಕತೆಯಾದೀತೇನೋ?
ಅದಾದ ನಂತರದ ದಿನಗಳಲ್ಲಿ ನೀನು ಅವಳ ಬಗ್ಗೆ ಹೇಳಿದ್ದು ಆಕೆ ಬೆಳೆದು ಬಂದ ಪರಿಸ್ಥಿತಿ. ನೀವಿಬ್ಬರೂ ಒಬ್ಬರಿಗೊಬ್ಬರು ನೆರವಾಗುವ ರೀತಿ, ಪೇಟೆಯ ಬೀದೀಲಿ ನಡೆದುಕೊಂಡು ಹೊರಟರೆ ಉಂಟಾಗುತ್ತಿದ್ದ ಸಂಚಲನ. ಅವಳ ಮನೆ, ಅವಳ ಕಷ್ಟ, ಅವಳು ಕೆಲಸ, ಬದುಕಿನ ನಡುವಿನ ಅವಳ ಹೋರಾಟ..... ಈ ಎಲ್ಲಾ ಕಾರಣಗಳಿಗಾಗಿ ನಿಮ್ಮಿಬ್ಬರ ಮೇಲಿನ ಅಭಿಮಾನ ಇನ್ನೂ ಜೀವಂತ. ಆ ಗೆಳತಿ ಕಳೆದ ಒಂದೂವರೆ ದಶಕಗಳಿಂದಲೂ ಹೆಚ್ಚು ಕಾಲ ನಿನ್ನ ಬೆನ್ನಿಗೆ ನೆರಳಾಗಿ ನಿಂತಿದ್ದಳು ಎನ್ನುವ ಅಭಿಮಾನ.


(ಚಿತ್ರ ಕೃಪೆ: ಇಂಟರ್ ನೆಟ್)

ಈಗ ಅವಳಿಗೆ ಮದುವೆ ಸಂಭ್ರಮ. ಸಪ್ತಪದಿ ತುಳಿದು, ಹಿನ್ನೆಲೆಯಲ್ಲಿ ಮಾಂಗಲ್ಯಂ ತಂತು ನಾನೇನಾ.... ಎಂದು ಹೇಳುತ್ತಿದ್ದರೆ ಅವಳು ಅಲ್ಲಿ ಮಾಂಗಲ್ಯ ಕೊರಳಿಗೇರಿಸಲು ತಲೆ ಬಾಗಿಸಿರುತ್ತಾಳೆ. ಆ ವೇಳೆ ಅವಳ ಮುಖದಲ್ಲಿ ನಾಚಿಕೆಯ ರಂಗೊಡೆದಿರಬೇಕು. ನಿನ್ನ ಪರಮಾಪ್ತೆ, ಸಖಿ, ಅತ್ಮ ಬಂಧು ಎಂಬ ವಿಶೇಷಣಗಳೊಂದಿಗೆ ನಿನ್ನ ಕಣ್ಣ ಮುಂದೆ ಬೆಳೆದ ಹುಡುಗಿ, ಇದುವರೆಗಿನ ಒಂಟೀ ಜೀವನದಿಂದ ಜಂಟಿ ಜೀವನಕ್ಕೆ ಕಾಲಿರಿಸುತ್ತಿದ್ದಾಳೆ. ಹಾಗೆ ಅವಳು ಪ್ರೀತಿಯ ಹುಡುಗನ ಮುಂದೆ ತಲೆಬಾಗಿ ಕೊರಳೊಡ್ಡಿ ನಿಂತಾಗ, ಮಾಂಗಲ್ಯ ಅವಳ ಕೊರಳು ಸೇರಿದಾಗ ಅಲ್ಲಿ ಅಕ್ಷತೆ ಹಾಕಲು ನೀನಿರಬೇಕು. ಅದು ಅವಳ ಸುಂದರ ಭವಿಷ್ಯಕ್ಕೆ ನೀ ಬರೆವ ಮುನ್ನುಡಿ. ಆ ಕ್ಷಣ ಅವಳ ಪಾಲಿಗೆ ಧನ್ಯ ನಿಮಿಷ. ಅವಳ ಸಂತಸಕ್ಕೆ ನಿನ್ನದೊಂದು ಅಭಿಮಾನದ ಅಪ್ಪುಗೆಯಿರಲಿ. ಅದರಲ್ಲಿ ಅವಳು ಕಳೆದು ಹೋಗದಿರಲಿ. ಮತ್ತೇನಿದ್ದರೂ ಅವಳ ಪ್ರೀತಿಯ ಹುಡುಗನಿದ್ದಾನಲ್ಲ. ನಿನ್ನ ಶುಭಹಾರೈಕೆಯ ಅಕ್ಷತೆಯಲ್ಲಿ ನನ್ನದೂ ಒಂದು ಹಾರೈಕೆ ಇರುತ್ತದೆ.
ಆ ಹಾರೈಕೆ ಸಾಲುಗಳಿವು-
ಗೆಳತಿಯ ಸಖಿಯೇ ನಿನಗಿದೋ ಸುಖೀ ದಾಂಪತ್ಯದ ಶುಭಾಶಯ.
ಗೆಳತಿಯ ಆತ್ಮಸಖಿಗೆ ಶುಭ್‌ವಿವಾಹ್!!!

ಇಂತಿ ನಿನ್ನ ಪ್ರೀತಿಯ ಗೆಳತಿಯ ಗೆಳೆಯ.

Saturday, May 02, 2009

ಮಳೆ ಬಂದು ಹೋದ ಮೇಲೆ ಭಾವಗಳು ಕಾಡಿದೇ...

ಒಂದು ಮಳೆ ಈ ಪರಿ ಕಾಡುತ್ತಾ. ಮಳೆ ಬಂದರೆ ಭಾವನೆಗಳು, ಹಳೆಯ ನೆನಪುಗಳು ಮರುಕಳಿಸುತ್ತಾ? ಕಳೆದ ಸುಂದರ ದಿನಗಳು ನವಿರು ನವಿರಾಗಿ ಬಿಚ್ಚಿಕೊಳ್ಳುತ್ತಾ? ಅದು ಮಳೆಯ ಮಹಿಮೆಯಾ? ಇಲ್ಲ ಮಳೆಯನ್ನು ಒಡಲಾಳಕ್ಕೆ ಸ್ವೀಕರಿಸಿ ಅದುಮಿಕೊಳ್ಳುವ ಧರೆಯ ಮಹಿಮೆಯಾ? ಅಲ್ಲಾ, ಅದಕ್ಕಿಂತಲೂ ಮಿಗಿಲಾದ ಸಂಬಂಧ ಎಲ್ಲಿಂದಲೋ ಬಂದು ನಮ್ಮ ನೆನಪುಗಳನ್ನು ಈ ಪರಿಯಾಗಿ ಕಾಡುತ್ತಾ ಗೊತ್ತಿಲ್ಲ.

ನಿಜಕ್ಕೂ ಈ ಪ್ರಶ್ನೆಗೆ ಉತ್ತರ ನಂಗೆ ಗೊತ್ತಿಲ್ಲ. ಆದರೆ ಹೊರಗೆ ಮಳೆ ಆವರಿಸುತ್ತಿದ್ದರೆ ಇಲ್ಲಿ ಮನದ ಒಳಗಡೆ ನೂರು ಭಾವನೆಗಳ ತಾಳ ಲಯದ ಜತೆ ನರ್ತನವಾಡುತ್ತದೆ. ಎಂದೋ ಕಳೆದ ಮಳೆಗಾಲ ನೆನಪಾಗುತ್ತವೆ. ಅಷ್ಟಕ್ಕೂ ಮಳೆಗೂ ನೆನಪಿಗೂ ಅಂತಹ ಅವಿನಾಭಾವ ಸಂಬಂಧವಿದೆಯಾ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಆದರೆ ಕಳೆದ ಮೂರು ಮಳೆಯ ದಿನಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

1 ಈ ವರ್ಷದ ಮೊದಲ ಮಳೆ ನನ್ನ ಕಾಡಿದ್ದು ಮಾರ್ಚ್ ತಿಂಗಳಲ್ಲಿ. ಅದು ಊರಲ್ಲಿರುವ ಕಂಬಾರು ದೇವಸ್ಥಾನದ ಜಾತ್ರೆಯಲ್ಲಿ. ಸುಮಾರು ೭ರಿಂದ ೮ ವರ್ಷಗಳ ನಂತರ ಊರ ಜಾತ್ರೆ ಸಂಭ್ರಮ ನನ್ನ ಪಾಲಿಗೆ ಒದಗಿ ಬಂದಿತ್ತು. ಅಂದು ರಾತ್ರಿ ಸಾಂಸ್ಕೃತಿಕ ಕಾರ್‍ಯಕ್ರಮದ ನೃತ್ಯ ಆರಂಭವಾಗಿ ಮೂರನೇ ನೃತ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ಧೋ ಎಂದು ಸುರಿದಿತ್ತು ಮಳೆ. ಅಂದು ಮಳೆ ಬರುತ್ತದೆ ಎನ್ನುವ ಯಾವುದೇ ಸೂಚನೆಯಿರಲಿಲ್ಲ. ಆದರೆ ಅಂದು ಸುರಿದ ಮಳೆಯಲ್ಲೂ ಭಾವನೆಗಳ ತಾಕಲಾಟವಿತ್ತು. ಆದರೂ ಮಳೆ ಮುಗಿದು ಹೋದ ಮೇಲೆ ಯಾಕೋ ಮನಸ್ಸು ಸರಿಯಾದ ಸ್ಥಿಮಿತದಲ್ಲಿರಲಿಲ್ಲ. ಅದು ಮಳೆಯನ್ನು ಯಾರ ಜತೆಗೋ ಹಂಚಿಕೊಳ್ಳಬೇಕು ಎಂಬ ಆಶಯವಾ?

ನಮ್ಮೂರು ಕಾಸರಗೋಡಿನ ಮಟ್ಟಿಗೆ ಮಾರ್ಚ್ ತಿಂಗಳಲ್ಲಂತೂ ಮಳೆ ಎಂಬುದು ಕನಸಿನ ಮಾತು. ಅಲ್ಲಿ ಮಳೆ ಕಾಲಿಡಲು ಏಪ್ರಿಲ್ ತಿಂಗಳ ಕೊನೆಯಾದರೂ ಆಗಬೇಕು. ಇಲ್ಲವೆಂದರೆ ಮಳೆ ಬರುವುದು ಸಾಧ್ಯವೇ ಇಲ್ಲ. ಅಂದು ಬಿದ್ದ ಆ ಮಳೆಗೆ ಸಾಕಷ್ಟು ನೆನೆದೆ. ಅದು ಈ ಬಾರಿಯ ಮಳೆಯ ಪ್ರಥಮ ನೆನಪು.

2 ಆಮೇಲೆ ಈ ಮಳೆ ಮೊನ್ನೆ ಮಾರ್ಚ್‌ನಲ್ಲಿ ಯುಗಾದಿ ದಿನ ಮಡಿಕೇರಿ ಪಿಕ್‌ನಿಕ್‌ನಲ್ಲಿದ್ದಾಗ ಬಂದ ಮಳೆ. ಮಡಿಕೇರಿಯ ಮಳೆ ನನ್ನ ಪಾಲಿಗೆ ಹೊಸದಲ್ಲ. ಆದರೆ ಮಡಿಕೇರಿ ಮಳೆಗೂ ಅಲ್ಲಿನ ಚಳಿಗೂ ಭಾವನಾಪೂರ್ಣ ನಂಟು. ಅಲ್ಲಿ ಬರುವ ಮಳೆಯ ಹನಿ ಹನಿಯೂ ಅಷ್ಟರ ಮಟ್ಟಿಗೆ ಕಾಡುತ್ತದೆ. ಬಹುಶಃ ಇದು ಕೇವಲ ನನ್ನ ಪಾಲಿಗೆ ಸೀಮಿತವಾಗಿರಲ್ಲ ಎನ್ನುವುದು ನನ್ನ ನಂಬಿಕೆ. ಜೀವನದಲ್ಲಿ ತೀರಾ ಡಿಪ್ರೆಸ್ ಆದಾಗ ನನ್ನ ಪಾಲಿಗೆ ಗೋಚರಿಸುವುದು ಅದೇ ಮಡಿಕೇರಿಯ ಬಿಂಬ. ಇತ್ತೀಚಿನ ದಿನಗಳಲ್ಲಿ ಬುದ್ಧನ ತತ್ವಗಳು ಇಷ್ಟವಾಗುತ್ತಿವೆ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಮಳೆ ಬಂದರೆ ಮಾತ್ರ ಭಾವನೆಗಳು ಟಿಸಿಲೊಡೆಯುತ್ತವಾ ಎಂದು ಕೇಳಿದರೆ ನಾ ನೀಡುವ ಉತ್ತರ ಹೌದು ಎನ್ನುವುದು ಮಾತ್ರ. ಎಲ್ಲೋ ಕಳೆದು ಹೋದ ಮಧರ ಬಾಂಧವ್ಯವನ್ನು ಮಳೆ ನಮಗೆ ಮತ್ತೆ ಮರುಕಳಿಸಲು ನೆರವಾಗುತ್ತವೆ. ಅದಕ್ಕೆ ತೀರಾ ಭಾವುಕನಾಗಿ ಏಕಾಂಗಿಯಾಗಿರಬೇಕು ಎನಿಸಿದಾಗ ಇಂತಹ ಸ್ಥಳಗಳು ನನಗೆ ಅತೀವವಾಗಿ ಇಷ್ಟವಾಗುತ್ತದೆ. ಇಲ್ಲಿಗೆ ಮಡಿಕೇರಿ ಕತೆಯನ್ನು ಮುಗಿಸುತ್ತೇನೆ. ಮಡಿಕೇರಿಯ ಭಾವನೆಗಳಿಗೆ ಸ್ಪಂದಿಸುವ ರೀತಿಯನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ.

3 ಆ ನಂತರ ಕಾಡಿದ್ದು ಮೊನ್ನೆ ಬೆಂಗಳೂರ ಮಳೆ. ಆ ಮಳೆಯ ರಭಸ ಭಾರೀ ಚೆನ್ನಾಗಿತ್ತು. ಆದರೆ ಊರಿನ ಅಥವಾ ಮಡಿಕೇರಿಯ ಮಳೆಯ ರೀತಿಯಲ್ಲಿ ಈ ಬಾರಿ ಭಾವನೆಗಳು ಉಕ್ಕಿ ಬರಲಿಲ್ಲ ಎನ್ನುವುದು ಮಾತ್ರ ನಿಜ. ಆದರೂ ಕೆಲವು ನೆನಪುಗಳು ಕಾಡಿತ್ತು. ಅದು ಯಾಕೆ ಅಂದು ಆ ರೀತಿ ಕಾಡಿತ್ತು ಗೊತ್ತಿಲ್ಲ. ಅದು ಭಾವನೆ ಹಾಗೂ ಭಾವಗಳ ಜುಗಲ್‌ಬಂದಿ. ಅದರಲ್ಲಿ ಯಾವುದು ಮೊದಲು ಯಾವುದು ಕೊನೆ ಎನ್ನುವುದು ಇಲ್ಲ.

ಹೀಗೆ ಪ್ರತಿ ಮಳೆಯೂ ಬಹುವಾಗಿ ಕಾಡುತ್ತದೆ. ಕೆಲವೊಮ್ಮೆ ಹೆಚ್ಚು, ಇನ್ನು ಕೆಲವೊಮ್ಮೆ ಕಡಿಮೆ. ಕೆಲವು ದಿನದ ಮೋಡದ ವಾತಾವರಣ ನೋಡಿ ಮೂಡ್ ಅಪ್‌ಸೆಟ್ ಆಗಿ ಬಿಡುತ್ತದೆ. ಆದರೆ ಮನಸ್ಸೆಂಬ ಮರ್ಕಟ ಇದನ್ನೆಲ್ಲಾ ಅರ್ಥೈಸಿಕೊಳ್ಳದೆ ಎಲ್ಲಾ ನೆನಪುಗಳನ್ನೂ ಕೆದಕಿ ಜೀವನವನ್ನು ಮುಂದೆ ಸಾಗಹಾಕುತ್ತದೆ. ಇನ್ನು ಮುಂದಿನ ಮಳೆಗಾಗಿ ಕಾಯಬೇಕು. ಆ ಮಳೆ ಬಿದ್ದು ಧರೆಯ ಸೇರಿ ಕ್ಷಣ ಮಾತ್ರದಲ್ಲಿ ಬರುವ ಮಣ್ಣಿನ ಘಮದಂತೆ ನೆನಪುಗಳು ಪ್ರತಿಬಿಂಬಗಳಾಗಿ ಹೊರಹೊಮ್ಮಬೇಕು. ಹಾಗಾದರೆ ಈ ಮಳೆ ಧನ್ಯ, ಜತೆಗೆ ನಾನೂ ಅದರೊಂದಿಗೆ ನೆನಪು ಹಾಗೂ ಭಾವಗಳು...!!!