Wednesday, June 24, 2009

24 ಕ್ಕೆ ವಂದನೆ, 25 ಕ್ಕೆ ಪಾದಾರ್ಪಣೆ

ಇಂದಿಗೆ 25 ವರ್ಷಕ್ಕೆ ಪಾದಾರ್ಪಣೆ. ಅರ್ಥಾತ್ ಎಲ್ಲರೂ ಹೇಳುವಂತೆ ರಜತ ಸಂಭ್ರಮದ ಕಾಲ. ಆದರೆ ನನ್ನ ಪಾಲಿಗೆ ಇದು ಜಸ್ಟ್ ಎನದರ್ ಡೇ. ಸಂಭ್ರಮಿಸುವ ಘಳಿಗೆ ಇನ್ನೂ ಕೂಡಿ ಬಂದಿಲ್ಲ. ಈ ದಿನವನ್ನು ಆಚರಿಸಿದರೆ ಅದು ವಿಶೇಷ ಎನ್ನುವುದು ಏನೂ ಸಂಭವಿಸುವುದಿಲ್ಲ ಎಂದೂ ಗೊತ್ತು. ಹಾಗಂತ ಅದು ವೈರಾಗ್ಯವಲ್ಲ. ಹುಟ್ಟು ಸಾವಿನ ನಡುವಣ ಹಾದಿಯಲ್ಲಿ ಕಳೆಯುವ ೩೬೫ ದಿನಕ್ಕೊಂದರಂತೆ ಒಂದಂಕಿ ಏರಿಕೆ ಮಾತ್ರ.

ಹಿಂದೊಂದು ಕಾಲವಿತ್ತು. ಜೂ.24 ಅಂದರೆ ಸಾಕು ಅದು ಸಂಭ್ರಮದ ಕ್ಷಣ. ಪ್ರತಿ ವರ್ಷವೂ ಜೂನ್ 24 ಅಂದರೆ ದೊಡ್ಡಮ್ಮನ ಕೊಡುಗೆಗಳದ್ದೇ ಕಾರ್ಬಾರು. ಅಂತಹ ಒಂದು ಗಿಫ್ಟ್ ಕೊಡುತ್ತಿದ್ದರು. ಆದರೆ ಯಾವಾಗ ಎಸ್‌ಎಸ್‌ಎಲ್‌ಸಿ ಮುಗಿಯಿತೋ ಅಲ್ಲಿಗೆ ಸಂಭ್ರಮ ಕ್ಷೀಣಿಸಲಾರಂಭಿಸಿತು. ಆ ನಂತರದ ದಿನಗಳಲ್ಲಿ ಪಿಯುಸಿಯಲ್ಲಿ ಕೆಲವರ ಒತ್ತಾಯಕ್ಕೆ, ಪದವಿ ಕಲಿಯುವ ದಿನಗಳಲ್ಲಿ ಪತ್ರಿಕೋದ್ಯಮದ ಹಾದಿ ತೋರಿಸಿಕೊಟ್ಟ ಗೆಳತಿಯ ಒತ್ತಾಸೆಗೆ, ವಿಶ್ವವಿದ್ಯಾನಿಲಯದಲ್ಲಿ ಜೀವದ ಗೆಳತಿಯ ಮುಖದಲ್ಲಿ ಒಂದು ಮಂದಹಾಸವನ್ನು ಕಾಣಲಿಕ್ಕೆ ಬರ್ತ್‌ಡೇ ಇತ್ತು. ಅದಕ್ಕೆ ಅವರು ಟ್ರೀಟ್ ಹೆಸರಲ್ಲಿ ಅಸಲು ಬಡ್ಡಿ ಎರಡನ್ನೂ ಸ್ವೀಕರಿಸುತ್ತಿದ್ದರು ಎನ್ನುವುದೂ ಅಷ್ಟೇ ವಾಸ್ತವ!!!
ಬಹುಶಃ ಇಂತಹ ಕೆಲವು ಸಂಭ್ರಮ ಮತ್ತು ಹಲವರ ಪ್ರಯತ್ನಗಳಿಂದಾಗಿ ಇಂದು ನಾನು ನಾನಾಗಿದ್ದೇನೆ. ಇಲ್ಲದಿದ್ದರೆ ಎಲ್ಲಿ ಕಳೆದು ಹೋಗುತ್ತಿದ್ದೆನೋ ಏನೋ?
ಕಳೆದ 25 ವರ್ಷಗಳಲ್ಲಿ ಏನೆಲ್ಲಾ ಗಳಿಸಿದೆ, ಏನು ನಷ್ಟವಾಯಿತು ಎನ್ನುವುದಕ್ಕಿಂತ ಎಲ್ಲರೂ ನನ್ನ ಸಂತಸಕ್ಕೆ ಅವರ ಪಾಲಿನಿಂದ ಕೆಲವನ್ನು ನನಗೆ ಕೊಟ್ಟರು. ಆ ಕಾರಣಕ್ಕಾಗಿ ನಾನು ಎಲ್ಲರಿಗೂ ಆಭಾರಿ. ಈ 25 ರ ಸಂಭ್ರಮ ಮುಗಿವ ವೇಳೆಗೆ ಯಾರು ಏನಾಗಿರುತ್ತಾರೋ ಯಾರಿಗೆ ಗೊತ್ತು. ಆ ಸಂದರ್ಭ ಅರ್ಥಾತ್ ಮುಂದಿನ ಜೂ. 24ವೇಳೆಗೆ ನಿಮ್ಮ ಮುಂದೆ ನನ್ನ ಬಗೆಗಿನ ಎಲ್ಲವನ್ನೂ ಬ್ಲಾಗ್ ಅಂಗಣದಲ್ಲಿ ಸುಮ್ಮನೆ ಇಡಬೇಕು ಎನ್ನುವ ಆಶಯವಿದೆ. ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತೀನಿ ಎನ್ನುವುದರ ಬಗ್ಗೆ ನನಗೂ ಸಂದೇಹವಿದೆ.
ಕಳೆದು ಹೋದ 24 ವರ್ಷಗಳು ಬದುಕಿನಲ್ಲಿ ಅದರದ್ದೇ ಆದ ಪಾಠ ಕಲಿಸಿತು.ಬಾಲ್ಯ, ಶಾಲೆ, ಕಾಲೇಜು, ಉದ್ಯೋಗ, ಮುಂದೆ.....?
ಏನೇ ಇರಲಿ ನನ್ನ ಸುಖ, ದುಃಖ, ನೋವು ನಲಿವು, ಕೋಪ ತಾಪ ಎಲ್ಲವನ್ನೂ ಸಹಿಸಿ, ನನ್ನ ಜತೆಗೇ ಇದ್ದು, ದೂರ ಇದ್ದರೂ ಸದಾ ಹಿತಾಶಯವನ್ನೇ ಬಯಸುವ, ಸಮೀಪವಿದ್ದರೂ ಹಾರೈಕೆಗಳಿಂದಲೇ ಶುಭ ಕೋರುವ, ಜೀವನದ ಅವಿಭಾಜ್ಯ ಅಂಗ ಎಂದೇ ಪರಿಗಣಿಸಲ್ಪಟ್ಟ ಕುಟುಂಬದ ಎಲ್ಲ ಸದಸ್ಯರಿಗೂ 24ರ ಅಂತ್ಯದಲ್ಲಿ 25 ರ ಪಾದಾರ್ಪಣೆ ಸಮಯದಲ್ಲಿ ಒಲವು ತುಂಬಿದ ಥ್ಯಾಂಕ್ಸ್.

ನೀವಿರಲು ಜತೆಯಲ್ಲಿ ಬಾಳೆಲ್ಲ ಹಸಿರಾದಂತೆ...
ನಗುತ ನೀವು ಕರೆದರೆ ಮನದಿ ಸಂತೋಷ ಹಾಡಾದಂತೆ...

Wednesday, May 06, 2009

ಗೆಳತಿಯ ಆತ್ಮಸಖಿಗೆ ಶುಭ್ ವಿವಾಹ್!

ಮುದ್ದು ಗೆಳತಿಗೆ,
ನಿನ್ನ ಆತ್ಮ ಸಖಿಗೆ ಪಾಣಿಗ್ರಹಣ ವಿಷಯ ತಿಳಿದು ಸಂತೋಷವಾಯಿತು. ಅದರ ಜತೆಗೆ ನೀನು ಎಂದೋ ಅವಳ ಬಗ್ಗೆ ಹೇಳಿದಾಗ ಕೇಳಿದ್ದ ವಿಷಯಗಳೆಲ್ಲಾ ನೆನಪಿಗೆ ಬಂದು ಮನವ ಕಾಡಿ ಭಾವ ಸಾಂದ್ರವಾಗಿಸಿತು. ಅವಳಿಗೆ ನನ್ನ ಪರಿಚಯವಿಲ್ಲದಿದ್ದರೂ ನೀನು ಹೇಳಿ ಅವಳಿಗೆ ನನ್ನ ಪರಿಚಯವಿದೆ ಎಂದು ತಿಳಿದುಕೊಂಡಿದ್ದೇನೆ. ಅದೇ ಕಾರಣಕ್ಕೆ ಸುಮ್ಮನೆ ಒಂದು ಬಾರಿ ಎಲ್ಲವನ್ನೂ ಮೆಲುಕು ಹಾಕುವ ಯತ್ನವನ್ನು ಮಾಡುತ್ತಿದ್ದೇನೆ.

ನಾವು ಆಗಷ್ಟೇ ಕಾಲೇಜು ಸೇರಿದ್ದೆವು. ಯಾರ ಪೂರ್ವಾಪರದ ಬಗ್ಗೆಯೂ ಯಾರಿಗೂ ಅರಿವಿರಲಿಲ್ಲ. ಕಾಲೇಜು ಸೇರಿ ಸುಮಾರು ಮೂರ್ನಾಲ್ಕು ತಿಂಗಳು ಕಳೆದ ನಂತರವೇ ನಾವು ಚಿರಪರಿಚಿತರಾದೆವು. ಅಂದಿನಿಂದ ನೀನು ಎಲ್ಲಾ ಪೂರ್ವಾಪರಗಳನ್ನೂ ಹೇಳುತ್ತಾ ಹೋದೆ.

ಇವುಗಳ ನಡುವೆ ನನಗೆ ನಿನ್ನಲ್ಲಿ ಇಷ್ಟವಾಗಿ ಕಾಡಿದ್ದು ಒಬ್ಬಳು ಆಸ್ಟ್ರೇಲಿಯಾದಲ್ಲಿರುವ ಹುಡುಗಿ, ಇನ್ನೊಬ್ಬಳು ಈ ಮದುವಣಗಿತ್ತಿ. ವಿಜೇಯ ಬಗ್ಗೆ ಇನ್ನೆಂದಾದರೂ ವಿವರವಾಗಿ ಬರೆದೇನು. ಮದುವಣಗಿತ್ತಿಯ ಬಗ್ಗೆ ನೀನು ಸಂಪೂರ್ಣವಾಗಿ ಹೆಳಿದ್ದು ನಾನು ನಿನ್ನ ಮನೆಗೆ ಬಂದಿದ್ದಾಗ. ಅದಕ್ಕಿಂತ ಮೊದಲು ಈ ಹೆಸರಿನ ಹುಡುಗಿ ಇದ್ದಾಳೆ ಎನ್ನುವುದು ತಿಳಿದಿತ್ತೇ ಹೊರತು ಅವಳ ಬಗ್ಗೆ ನೀ ಹೆಚ್ಚು ಬಾಯಿ ಬಿಟ್ಟಿರಲಿಲ್ಲ ಎನ್ನುವುದೇ ಸೂಕ್ತವಾದೀತೇನೋ?
ಆದರೆ ಅದೊಂದು ದಿನ ನಾನು ನಿನ್ನೂರಿಗೆ ಬಂದಿದ್ದೆ. ನಿನ್ನಲ್ಲಿ ಕೊಟ್ಟ ಮಾತಿಗೆ ಈತ ತಪ್ಪಲಿಲ್ಲ ಎನ್ನುವ ಸಂಭ್ರಮವಿತ್ತು. ನಿನಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತೋರಿಸುವ ಮತ್ತು ಹೇಳುವ ಉನ್ಮಾದವಿತ್ತು. ನನಗೆ ಅದೆಲ್ಲವನ್ನೂ ಕಿವಿಗೆ ತುಂಬಿಕೊಳ್ಳುವ ಕಾತರವಿತ್ತು. ಹಾಗೆ ಅಂದು ಅಪ್ಪ ನಮ್ಮಿಬ್ಬರನ್ನು ನಿನ್ನ ಕಾಲೇಜು ಬಳಿ ಬಿಟ್ಟಾಗ ಮಧ್ಯಾಹ್ನ ಸೂರ್‍ಯ ನೆತ್ತಿ ಮೇಲೇರುವ ಸಮಯ.
ಬಾರೋ ನಿನಗೆ ನನ್ನ ಕ್ಲಾಸ್ ತೋರಿಸ್ತೀನಿ ಎಂದು ನೀ ಕಲಿತ ತರಗತಿಯೊಳಗೆ ಕೊಂಡೊಯ್ದೆ. ಅಲ್ಲಿ ಒಂದೆಡೆ ನೀನು, ಇನ್ನೊಂದೆಡೆ ಮದುವಣಗಿತ್ತಿ, ಮತ್ತೊಂದು ಕಡೆ ನಿನ್ನ ಹಾಸ್ಟೆಲ್‌ಮೇಟ್ ಎಲ್ಲೆಲ್ಲಿ ಕುಳಿತುಕೊಂಡು ಏನೇನು ಕಿತಾಪತಿ ಮಾಡುತ್ತಿದ್ದೀರಿ ಎನ್ನುವುದನ್ನು ವಿವರವಾಗಿ ಹೇಳುತ್ತಾ ಹೋದೆ, ನಾ ಕೇಳುತ್ತಾ ಹೋದೆ. ಕ್ಲಾಸಲ್ಲಿ ಲೆಕ್ಚರರ್‌ಗೆ ಹೊಡೆಯುತ್ತಿದ್ದ ಲೈನ್, ಹೊಡೆಯುತ್ತಿದ್ದ ಶಿಳ್ಳೆ ಇತ್ಯಾದಿ ನಿಮ್ಮಿಬ್ಬರ ಮಸುಕು ನೆನಪಿನ ತೇರನೆಳೆದು ಮತ್ತೆ ಸಂಭ್ರಮಿಸಿದ್ದೆ.:-)
ಆನಂತರ ನಾವು ಶಾಲೆಯ ಬಳಿ ಹೋಗಿ ಅಲ್ಲಿ ಮಣ್ಣಿನಲ್ಲೇ ಕುಳಿತಿದ್ದು ನೆನಪಿದೆಯಾ? ಅಲ್ಲಿನ ಮರಗಳ ನಡುವಣ ಗುಡ್ಡವನ್ನು ತೋರಿಸಿ ನೋಡು ಇಲ್ಲೇ ನಾವಿಬ್ಬರೂ ಆಟವಾಡುತ್ತಾ ಇದ್ದಿದ್ದು. ನಾವು ಮಾಡದ ತಂಟೆಗಳಿಲ್ಲ ಎಂದು ಹೇಳಿದ್ದೆ. ಹಾಗೇ ಇನ್ನೂ ಏನೇನೋ ವಿಷಯಗಳನ್ನು ಅವಳ ಬಗ್ಗೆ ವಿವರವಾಗಿ ಹೇಳಿದ್ದೆ. ಆನಂತರ ಮನೆಗೆ ವಾಪಸಾಗಬೇಕಾದರೆ ಮನೆಗೆ ಬರುವ ಯಾವುದೋ ಕ್ರಾಸ್‌ನಲ್ಲಿ ನಿಲ್ಲಿಸಿ,ಇಲ್ಲಿ ನಾವು ಐಸ್‌ಕ್ರೀಂ ತಿನ್ನುತ್ತಾ ಇದ್ವಿ ಎಂದಿದ್ದೆ. ಆ ಬಾಲ್ಯದ ದಿನಗಳೆಲ್ಲಾ ನಿನ್ನ ಗೆಳತಿಯ ಹೆಸರಲ್ಲಿ ನಿನ್ನನ್ನು ಬಹುವಾಗಿ ಕಾಡುತ್ತೆ. ಅವಳು ನೀನು ಮಾಡುತ್ತಿದ್ದ ಕಿತಾಪತಿ, ಮನೆಗೆ ಬಂದರೆ ಅಮ್ಮನ ಮಧ್ಯಸ್ಥಿಕೆ, ನಿನ್ನ ತಂಟೆ, ಗೆಳತಿಯ ಜತೆಗಿನ ಜಗಳ ಇತ್ಯಾದಿ ಇತ್ಯಾದಿ... ನೀನು ಗೆಳತಿಯ ಬಗ್ಗೆ ಹೇಳಿದ ಎಲ್ಲಾ ಮಾತುಗಳನ್ನು ಬರೆಯಲು ಹೊರಟರೆ ಅದುವೇ ಒಂದು ಕತೆಯಾದೀತೇನೋ?
ಅದಾದ ನಂತರದ ದಿನಗಳಲ್ಲಿ ನೀನು ಅವಳ ಬಗ್ಗೆ ಹೇಳಿದ್ದು ಆಕೆ ಬೆಳೆದು ಬಂದ ಪರಿಸ್ಥಿತಿ. ನೀವಿಬ್ಬರೂ ಒಬ್ಬರಿಗೊಬ್ಬರು ನೆರವಾಗುವ ರೀತಿ, ಪೇಟೆಯ ಬೀದೀಲಿ ನಡೆದುಕೊಂಡು ಹೊರಟರೆ ಉಂಟಾಗುತ್ತಿದ್ದ ಸಂಚಲನ. ಅವಳ ಮನೆ, ಅವಳ ಕಷ್ಟ, ಅವಳು ಕೆಲಸ, ಬದುಕಿನ ನಡುವಿನ ಅವಳ ಹೋರಾಟ..... ಈ ಎಲ್ಲಾ ಕಾರಣಗಳಿಗಾಗಿ ನಿಮ್ಮಿಬ್ಬರ ಮೇಲಿನ ಅಭಿಮಾನ ಇನ್ನೂ ಜೀವಂತ. ಆ ಗೆಳತಿ ಕಳೆದ ಒಂದೂವರೆ ದಶಕಗಳಿಂದಲೂ ಹೆಚ್ಚು ಕಾಲ ನಿನ್ನ ಬೆನ್ನಿಗೆ ನೆರಳಾಗಿ ನಿಂತಿದ್ದಳು ಎನ್ನುವ ಅಭಿಮಾನ.


(ಚಿತ್ರ ಕೃಪೆ: ಇಂಟರ್ ನೆಟ್)

ಈಗ ಅವಳಿಗೆ ಮದುವೆ ಸಂಭ್ರಮ. ಸಪ್ತಪದಿ ತುಳಿದು, ಹಿನ್ನೆಲೆಯಲ್ಲಿ ಮಾಂಗಲ್ಯಂ ತಂತು ನಾನೇನಾ.... ಎಂದು ಹೇಳುತ್ತಿದ್ದರೆ ಅವಳು ಅಲ್ಲಿ ಮಾಂಗಲ್ಯ ಕೊರಳಿಗೇರಿಸಲು ತಲೆ ಬಾಗಿಸಿರುತ್ತಾಳೆ. ಆ ವೇಳೆ ಅವಳ ಮುಖದಲ್ಲಿ ನಾಚಿಕೆಯ ರಂಗೊಡೆದಿರಬೇಕು. ನಿನ್ನ ಪರಮಾಪ್ತೆ, ಸಖಿ, ಅತ್ಮ ಬಂಧು ಎಂಬ ವಿಶೇಷಣಗಳೊಂದಿಗೆ ನಿನ್ನ ಕಣ್ಣ ಮುಂದೆ ಬೆಳೆದ ಹುಡುಗಿ, ಇದುವರೆಗಿನ ಒಂಟೀ ಜೀವನದಿಂದ ಜಂಟಿ ಜೀವನಕ್ಕೆ ಕಾಲಿರಿಸುತ್ತಿದ್ದಾಳೆ. ಹಾಗೆ ಅವಳು ಪ್ರೀತಿಯ ಹುಡುಗನ ಮುಂದೆ ತಲೆಬಾಗಿ ಕೊರಳೊಡ್ಡಿ ನಿಂತಾಗ, ಮಾಂಗಲ್ಯ ಅವಳ ಕೊರಳು ಸೇರಿದಾಗ ಅಲ್ಲಿ ಅಕ್ಷತೆ ಹಾಕಲು ನೀನಿರಬೇಕು. ಅದು ಅವಳ ಸುಂದರ ಭವಿಷ್ಯಕ್ಕೆ ನೀ ಬರೆವ ಮುನ್ನುಡಿ. ಆ ಕ್ಷಣ ಅವಳ ಪಾಲಿಗೆ ಧನ್ಯ ನಿಮಿಷ. ಅವಳ ಸಂತಸಕ್ಕೆ ನಿನ್ನದೊಂದು ಅಭಿಮಾನದ ಅಪ್ಪುಗೆಯಿರಲಿ. ಅದರಲ್ಲಿ ಅವಳು ಕಳೆದು ಹೋಗದಿರಲಿ. ಮತ್ತೇನಿದ್ದರೂ ಅವಳ ಪ್ರೀತಿಯ ಹುಡುಗನಿದ್ದಾನಲ್ಲ. ನಿನ್ನ ಶುಭಹಾರೈಕೆಯ ಅಕ್ಷತೆಯಲ್ಲಿ ನನ್ನದೂ ಒಂದು ಹಾರೈಕೆ ಇರುತ್ತದೆ.
ಆ ಹಾರೈಕೆ ಸಾಲುಗಳಿವು-
ಗೆಳತಿಯ ಸಖಿಯೇ ನಿನಗಿದೋ ಸುಖೀ ದಾಂಪತ್ಯದ ಶುಭಾಶಯ.
ಗೆಳತಿಯ ಆತ್ಮಸಖಿಗೆ ಶುಭ್‌ವಿವಾಹ್!!!

ಇಂತಿ ನಿನ್ನ ಪ್ರೀತಿಯ ಗೆಳತಿಯ ಗೆಳೆಯ.

Saturday, May 02, 2009

ಮಳೆ ಬಂದು ಹೋದ ಮೇಲೆ ಭಾವಗಳು ಕಾಡಿದೇ...

ಒಂದು ಮಳೆ ಈ ಪರಿ ಕಾಡುತ್ತಾ. ಮಳೆ ಬಂದರೆ ಭಾವನೆಗಳು, ಹಳೆಯ ನೆನಪುಗಳು ಮರುಕಳಿಸುತ್ತಾ? ಕಳೆದ ಸುಂದರ ದಿನಗಳು ನವಿರು ನವಿರಾಗಿ ಬಿಚ್ಚಿಕೊಳ್ಳುತ್ತಾ? ಅದು ಮಳೆಯ ಮಹಿಮೆಯಾ? ಇಲ್ಲ ಮಳೆಯನ್ನು ಒಡಲಾಳಕ್ಕೆ ಸ್ವೀಕರಿಸಿ ಅದುಮಿಕೊಳ್ಳುವ ಧರೆಯ ಮಹಿಮೆಯಾ? ಅಲ್ಲಾ, ಅದಕ್ಕಿಂತಲೂ ಮಿಗಿಲಾದ ಸಂಬಂಧ ಎಲ್ಲಿಂದಲೋ ಬಂದು ನಮ್ಮ ನೆನಪುಗಳನ್ನು ಈ ಪರಿಯಾಗಿ ಕಾಡುತ್ತಾ ಗೊತ್ತಿಲ್ಲ.

ನಿಜಕ್ಕೂ ಈ ಪ್ರಶ್ನೆಗೆ ಉತ್ತರ ನಂಗೆ ಗೊತ್ತಿಲ್ಲ. ಆದರೆ ಹೊರಗೆ ಮಳೆ ಆವರಿಸುತ್ತಿದ್ದರೆ ಇಲ್ಲಿ ಮನದ ಒಳಗಡೆ ನೂರು ಭಾವನೆಗಳ ತಾಳ ಲಯದ ಜತೆ ನರ್ತನವಾಡುತ್ತದೆ. ಎಂದೋ ಕಳೆದ ಮಳೆಗಾಲ ನೆನಪಾಗುತ್ತವೆ. ಅಷ್ಟಕ್ಕೂ ಮಳೆಗೂ ನೆನಪಿಗೂ ಅಂತಹ ಅವಿನಾಭಾವ ಸಂಬಂಧವಿದೆಯಾ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಆದರೆ ಕಳೆದ ಮೂರು ಮಳೆಯ ದಿನಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

1 ಈ ವರ್ಷದ ಮೊದಲ ಮಳೆ ನನ್ನ ಕಾಡಿದ್ದು ಮಾರ್ಚ್ ತಿಂಗಳಲ್ಲಿ. ಅದು ಊರಲ್ಲಿರುವ ಕಂಬಾರು ದೇವಸ್ಥಾನದ ಜಾತ್ರೆಯಲ್ಲಿ. ಸುಮಾರು ೭ರಿಂದ ೮ ವರ್ಷಗಳ ನಂತರ ಊರ ಜಾತ್ರೆ ಸಂಭ್ರಮ ನನ್ನ ಪಾಲಿಗೆ ಒದಗಿ ಬಂದಿತ್ತು. ಅಂದು ರಾತ್ರಿ ಸಾಂಸ್ಕೃತಿಕ ಕಾರ್‍ಯಕ್ರಮದ ನೃತ್ಯ ಆರಂಭವಾಗಿ ಮೂರನೇ ನೃತ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ಧೋ ಎಂದು ಸುರಿದಿತ್ತು ಮಳೆ. ಅಂದು ಮಳೆ ಬರುತ್ತದೆ ಎನ್ನುವ ಯಾವುದೇ ಸೂಚನೆಯಿರಲಿಲ್ಲ. ಆದರೆ ಅಂದು ಸುರಿದ ಮಳೆಯಲ್ಲೂ ಭಾವನೆಗಳ ತಾಕಲಾಟವಿತ್ತು. ಆದರೂ ಮಳೆ ಮುಗಿದು ಹೋದ ಮೇಲೆ ಯಾಕೋ ಮನಸ್ಸು ಸರಿಯಾದ ಸ್ಥಿಮಿತದಲ್ಲಿರಲಿಲ್ಲ. ಅದು ಮಳೆಯನ್ನು ಯಾರ ಜತೆಗೋ ಹಂಚಿಕೊಳ್ಳಬೇಕು ಎಂಬ ಆಶಯವಾ?

ನಮ್ಮೂರು ಕಾಸರಗೋಡಿನ ಮಟ್ಟಿಗೆ ಮಾರ್ಚ್ ತಿಂಗಳಲ್ಲಂತೂ ಮಳೆ ಎಂಬುದು ಕನಸಿನ ಮಾತು. ಅಲ್ಲಿ ಮಳೆ ಕಾಲಿಡಲು ಏಪ್ರಿಲ್ ತಿಂಗಳ ಕೊನೆಯಾದರೂ ಆಗಬೇಕು. ಇಲ್ಲವೆಂದರೆ ಮಳೆ ಬರುವುದು ಸಾಧ್ಯವೇ ಇಲ್ಲ. ಅಂದು ಬಿದ್ದ ಆ ಮಳೆಗೆ ಸಾಕಷ್ಟು ನೆನೆದೆ. ಅದು ಈ ಬಾರಿಯ ಮಳೆಯ ಪ್ರಥಮ ನೆನಪು.

2 ಆಮೇಲೆ ಈ ಮಳೆ ಮೊನ್ನೆ ಮಾರ್ಚ್‌ನಲ್ಲಿ ಯುಗಾದಿ ದಿನ ಮಡಿಕೇರಿ ಪಿಕ್‌ನಿಕ್‌ನಲ್ಲಿದ್ದಾಗ ಬಂದ ಮಳೆ. ಮಡಿಕೇರಿಯ ಮಳೆ ನನ್ನ ಪಾಲಿಗೆ ಹೊಸದಲ್ಲ. ಆದರೆ ಮಡಿಕೇರಿ ಮಳೆಗೂ ಅಲ್ಲಿನ ಚಳಿಗೂ ಭಾವನಾಪೂರ್ಣ ನಂಟು. ಅಲ್ಲಿ ಬರುವ ಮಳೆಯ ಹನಿ ಹನಿಯೂ ಅಷ್ಟರ ಮಟ್ಟಿಗೆ ಕಾಡುತ್ತದೆ. ಬಹುಶಃ ಇದು ಕೇವಲ ನನ್ನ ಪಾಲಿಗೆ ಸೀಮಿತವಾಗಿರಲ್ಲ ಎನ್ನುವುದು ನನ್ನ ನಂಬಿಕೆ. ಜೀವನದಲ್ಲಿ ತೀರಾ ಡಿಪ್ರೆಸ್ ಆದಾಗ ನನ್ನ ಪಾಲಿಗೆ ಗೋಚರಿಸುವುದು ಅದೇ ಮಡಿಕೇರಿಯ ಬಿಂಬ. ಇತ್ತೀಚಿನ ದಿನಗಳಲ್ಲಿ ಬುದ್ಧನ ತತ್ವಗಳು ಇಷ್ಟವಾಗುತ್ತಿವೆ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಮಳೆ ಬಂದರೆ ಮಾತ್ರ ಭಾವನೆಗಳು ಟಿಸಿಲೊಡೆಯುತ್ತವಾ ಎಂದು ಕೇಳಿದರೆ ನಾ ನೀಡುವ ಉತ್ತರ ಹೌದು ಎನ್ನುವುದು ಮಾತ್ರ. ಎಲ್ಲೋ ಕಳೆದು ಹೋದ ಮಧರ ಬಾಂಧವ್ಯವನ್ನು ಮಳೆ ನಮಗೆ ಮತ್ತೆ ಮರುಕಳಿಸಲು ನೆರವಾಗುತ್ತವೆ. ಅದಕ್ಕೆ ತೀರಾ ಭಾವುಕನಾಗಿ ಏಕಾಂಗಿಯಾಗಿರಬೇಕು ಎನಿಸಿದಾಗ ಇಂತಹ ಸ್ಥಳಗಳು ನನಗೆ ಅತೀವವಾಗಿ ಇಷ್ಟವಾಗುತ್ತದೆ. ಇಲ್ಲಿಗೆ ಮಡಿಕೇರಿ ಕತೆಯನ್ನು ಮುಗಿಸುತ್ತೇನೆ. ಮಡಿಕೇರಿಯ ಭಾವನೆಗಳಿಗೆ ಸ್ಪಂದಿಸುವ ರೀತಿಯನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ.

3 ಆ ನಂತರ ಕಾಡಿದ್ದು ಮೊನ್ನೆ ಬೆಂಗಳೂರ ಮಳೆ. ಆ ಮಳೆಯ ರಭಸ ಭಾರೀ ಚೆನ್ನಾಗಿತ್ತು. ಆದರೆ ಊರಿನ ಅಥವಾ ಮಡಿಕೇರಿಯ ಮಳೆಯ ರೀತಿಯಲ್ಲಿ ಈ ಬಾರಿ ಭಾವನೆಗಳು ಉಕ್ಕಿ ಬರಲಿಲ್ಲ ಎನ್ನುವುದು ಮಾತ್ರ ನಿಜ. ಆದರೂ ಕೆಲವು ನೆನಪುಗಳು ಕಾಡಿತ್ತು. ಅದು ಯಾಕೆ ಅಂದು ಆ ರೀತಿ ಕಾಡಿತ್ತು ಗೊತ್ತಿಲ್ಲ. ಅದು ಭಾವನೆ ಹಾಗೂ ಭಾವಗಳ ಜುಗಲ್‌ಬಂದಿ. ಅದರಲ್ಲಿ ಯಾವುದು ಮೊದಲು ಯಾವುದು ಕೊನೆ ಎನ್ನುವುದು ಇಲ್ಲ.

ಹೀಗೆ ಪ್ರತಿ ಮಳೆಯೂ ಬಹುವಾಗಿ ಕಾಡುತ್ತದೆ. ಕೆಲವೊಮ್ಮೆ ಹೆಚ್ಚು, ಇನ್ನು ಕೆಲವೊಮ್ಮೆ ಕಡಿಮೆ. ಕೆಲವು ದಿನದ ಮೋಡದ ವಾತಾವರಣ ನೋಡಿ ಮೂಡ್ ಅಪ್‌ಸೆಟ್ ಆಗಿ ಬಿಡುತ್ತದೆ. ಆದರೆ ಮನಸ್ಸೆಂಬ ಮರ್ಕಟ ಇದನ್ನೆಲ್ಲಾ ಅರ್ಥೈಸಿಕೊಳ್ಳದೆ ಎಲ್ಲಾ ನೆನಪುಗಳನ್ನೂ ಕೆದಕಿ ಜೀವನವನ್ನು ಮುಂದೆ ಸಾಗಹಾಕುತ್ತದೆ. ಇನ್ನು ಮುಂದಿನ ಮಳೆಗಾಗಿ ಕಾಯಬೇಕು. ಆ ಮಳೆ ಬಿದ್ದು ಧರೆಯ ಸೇರಿ ಕ್ಷಣ ಮಾತ್ರದಲ್ಲಿ ಬರುವ ಮಣ್ಣಿನ ಘಮದಂತೆ ನೆನಪುಗಳು ಪ್ರತಿಬಿಂಬಗಳಾಗಿ ಹೊರಹೊಮ್ಮಬೇಕು. ಹಾಗಾದರೆ ಈ ಮಳೆ ಧನ್ಯ, ಜತೆಗೆ ನಾನೂ ಅದರೊಂದಿಗೆ ನೆನಪು ಹಾಗೂ ಭಾವಗಳು...!!!

Sunday, February 15, 2009

ಪಾಪಿ ಚಿರಾಯು, ಅಲ್ಲ ನನ್ನ ನಿನ್ನ ಪ್ರೀತಿ ಚಿರಾಯು....!

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವ್ಯಾಲೆಂಟೈನ್ ಚರ್ಚೆ, ಅದು ಪಡೆಯುತ್ತಿರುವ ತಿರುವು, ಅದನ್ನು ಕೆಲವು ವಿಕೃತ ಮನಸುಗಳು ಕಲ್ಪಿಸಿಕೊಂಡ ರೀತಿ, ಅದಕ್ಕೆ ಕೆಲವು ಸೋಕಾಲ್ಡ್ ನ್ಯಾಷನಲ್ ಮಾಧ್ಯಮಗಳು ಕೊಟ್ಟ ಪ್ರಚಾರ, ಇವುಗಳ ನಡುವೆ ಹುಟ್ಟಿದ ಪಿಂಕ್ ಚಡ್ಡಿ, ಅದಕ್ಕೆ ವಿರುದ್ಧವಾಗಿ ಹುಟ್ಟಿದ ಪಿಂಕ್ ಕಾಂಡೋಂ ಎಲ್ಲವೂ ಪ್ರೀತಿಯ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ. ಕೆಲವು ಪತ್ರಿಕೆಗಳಂತೂ ತಾವೇ ವ್ಯಾಲೆಂಟೈನ್ ರಕ್ಷಕರೇನೋ ಎಂಬಂತೆ ವರ್ತಿಸುತ್ತಿವೆ.
ಆದರೆ ಇವು ಇಲ್ಲದೆ ಪ್ರೀತಿಯೇ ಇಲ್ಲವೇ? ಇದೆ ‘ನಾ ಕನಸು ಕಂಡ ಅವಳಂತೆ’. ಇಂದಿಗೂ ಪ್ರೀತಿ ನಿರಂತರವಾಗಿ ಹರಿಯುತ್ತದೆ. ಅದು ಅಕ್ಷಯ ಪಾತ್ರೆಯಿದ್ದಂತೆ. ಅಂದು ದ್ರೌಪದಿ ವಸ್ತ್ರಾಪಹರಣವಾಗುತ್ತಿದ್ದಾಗ ಸಂದರ್ಭ ಎಳೆದಷ್ಟೂ ಬೆಳೆದ ಸೀರೆಯಂತೆ. ಪ್ರೀತಿ ಯಾವತ್ತೂ ಹಾಗೇ ಇರಬೇಕು. ಅದನ್ನು ತಡೆಯಲೂ ಹೋಗಬಾರದು. ತಡೆದರೆ ತೊಡಗುವ ತೊಡಕು ಮತ್ತೆ ಮುಂದುವರಿಯಲು ಬಿಡುವುದಿಲ್ಲ.
ಆದರೆ ಪ್ರೀತಿ ಇಂದು ಎತ್ತ ಸಾಗುತ್ತಿದೆ. ಅದು ಕೇವಲ ದೈಹಿಕ ಆಕರ್ಷಣೆಗೆ ಮಾತ್ರ ಎನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ. ಯಾವಾಗ ಆ ಒಂದು ಭಾವ ಪ್ರೀತಿಯಲ್ಲಿ ಹುಟ್ಟಿ ಕಾಮ ಎಂಬಲ್ಲಿಗೆ ತಿರುಗಿ ಬಿಡುತ್ತದೋ ಅಲ್ಲಿಗೆ ಪ್ರೀತಿಯ ಅವಸಾನದ ಮೊದಲ ಮೆಟ್ಟಿಲು ತೆರೆದಂತೆ.
ಹೀಗೆ ಪ್ರೀತಿಯ ಬಗ್ಗೆ ಹೇಳುತ್ತಾ ನಾವು ಕಾಲೇಜು ದಿನಗಳಲ್ಲಿ ನಮ್ಮ ಕೈಗೆ ಮೊಬೈಲ್ ಲಭಿಸಿದಾಗ ಪಡೆದ ಸಂಭ್ರಮದ ನೆನಪಾಗುತ್ತದೆ. ಅಂದು ಇನ್‌ಬಾಕ್ಸ್ ತುಂಬುವ ಎಲ್ಲ ಎಸ್‌ಎಂಎಸ್‌ಗಳೂ ಪ್ರೀತಿಗೆ ಸಂಬಂಧಪಟ್ಟವುಗಳೇ. ಕಳುಹಿಸುವವರೋ ನಮ್ಮ ಪ್ರೀತಿ ಪಾತ್ರರು. ಅದರಲ್ಲಿ ಕೆಲವು ನವಿರಾದ ಕಂಪನವಿದೆ. ನೀನಿರದೆ ನಾನಿಲ್ಲ ಎಂಬ ಭಾವವಿದೆ. ಇಲ್ಲಿ ಕೆಲವು ಎಲ್ಲಾ ಮಿತಿಗಳನ್ನು ದಾಟಿ ಹೋದ ಎಸ್‌ಎಂಎಸ್‌ಗಳು. ಇನ್ನು ಕೆಲವು ಹುಚ್ಚುತನದ ಪರಮಾವಧಿ ಎಂಬಂತವುಗಳು. ಅವುಗಳಲ್ಲಿ ಆರಾಧನೆ, ಭಯ, ಪ್ರೀತಿ ಎಲ್ಲವೂ ಇರುತ್ತದೆ. ಆದರೆ ಅವ್ಯಾವುದೂ ಎಂದಿಗೂ ಭಯಾನಕ ಎನಿಸುವಂತಹ ವಾತಾವರಣ ಸೃಷ್ಟಿಸಲಿಲ್ಲ. ಬದಲಿಗೆ ಅವುಗಳೆಲ್ಲಾ ಒಂದು ಸುಂದರ ಸಂಬಂಧವನ್ನು ಸೃಷ್ಟಿಸಲು ಸಹಾಯ ಮಾಡಿದವು. ಹಾಗೆ ಮನಸ್ಸಿಗೆ ಇಷ್ಟವಾದವುಗಳು ಇನ್‌ಬಾಕ್ಸ್‌ನಿಂದ ಡಿಲೀಟ್ ಆಗದೆ ಹಾಗೇ ಉಳಿದುಕೊಂಡವು. ನನ್ನ ಹೃದಯವ ಕಾಡುವ ನಿನ್ನ ಮನಸಿನ ಹಾಗೆ
ಅಷ್ಟಕ್ಕೂ ಪ್ರೀತಿ ಅಂದರೆ ಏನು? ಅದು ಹೃದಯಗಳ ಭಾಷೆ. ಕೆಲವರು ಈ ವಾದ ಮಂಡಿಸುವಾಗ ಹೃದಯವಿದೆಯಾ ನಿನಗೆ ಎಂದು ಕೇಳುವವರೂ ಇರುತ್ತಾರೆ. ಅದು ಮನಸ್ಸಿನಲ್ಲಿ ಇದ್ದುದನ್ನು ಹೇಳಿ ನಿರಾಳವಾದ ಮಗುವಿನ ಭಾಷೆ. ಅದಕ್ಕೆ ಎಲ್ಲವುಗಳ ಕುತೂಹಲವಿರುತ್ತೆ. ಪ್ರೀತಿಯಲ್ಲೂ ಅವನಿಗೆ/ ಅವಳಿಗೆ ಕುತೂಹಲ ಇರುತ್ತವೆ. ಅದು ಬಾ ಎಂದಾಗ ಬರುವುದೂ ಇಲ್ಲ, ಹೋಗು ಎಂದಾಗ ಹೋಗುವುದೂ ಇಲ್ಲ. ಅದು ಹರಿವ ಜಲಲ ಜಲಲ ಧಾರೆ. ಅವನು ಹತ್ತಿರ ಇರುವಾಗ ಇದ್ದಷ್ಟು ಭಾವ ದೂರ ಇರುವಾಗಲೂ ಇರಬೇಕು. ಅದು ಬಿಟ್ಟು ನೀ ಪ್ರತಿಕ್ಷಣವೂ ನನ್ನ ಜತೆ ಇರಬೇಕು ಎಂಬ ಹಂಗ್ಯಾಕೆ?
ಪ್ರೀತಿಗೆ ಯಾರು ಎಷ್ಟು ದೂರವಿದ್ದರೇನು? ಎಷ್ಟು ಮೌನವಾದರೇನು? ಹಳೆಯ ಭರವಸೆಗಳು ಹಾಗೂ ಅವುಗಳನ್ನು ಉಳಿಸಿಕೊಂಡು ಹೋಗುವ ರೀತಿ ಗೊತ್ತಿದ್ದರೆ ಮುಗಿಯಿತು. ಮತ್ತೆ ಪ್ರೀತಿಸುವವರನ್ನು ಯಾರು ಏನೂ ಮಾಡಲೂ ಸಾಧ್ಯವಿಲ್ಲ. ಅದಕ್ಕೆ ವ್ಯಾಲೆಂಟೈನ್ ಎಂಬ ದಿನವೊಂದರ ಅಗತ್ಯವೂ ಇಲ್ಲ ಎಂದು ಹೇಳುತ್ತಾ ಈ ಪತ್ರ ನಿನಗೆ.


ಪ್ರೀತಿಯ ಹುಡುಗಿಗೆ,

ಇನ್ನೇನು ಕಾಲೇಜು ಮುಗಿಯಲು ಸರಿಸುಮಾರು ೧೦೦ ದಿನ ಬಾಕಿ. ಕಾಲೇಜಿನಲ್ಲಿ ಓಡಾಡುತ್ತಿದ್ದ ಜಿಂಕೆ ಮರಿಯಂತಹ ನಿನ್ನನ್ನು ಯಾಕೆ ಪ್ರೀತಿಸಲು ಆರಂಭಿಸಿದೆ ಎನ್ನುವುದು ಇನ್ನೂ ನಿಗೂಢ ಹಾಗೂ ಅಷ್ಟೇ ವಾಸ್ತವ. ಆದರೆ ಗೆಳತೀ ಒಂದಂತೂ ಸತ್ಯ ನಿನ್ನ ಪ್ರೀತಿಯಿಂದ ನಾ ಬದಲಾಗಿದ್ದೇನೆ.
ಮೊದಲು ಕೇವಲ ಗೆಳತಿಯಾಗಿದ್ದ ನೀನು ಈಗ ನನ್ನ ಪಾಲಿಗೆ, ದೋಸ್ತ್ ದೋಸ್ತ್ ನಾ ರಹಾ!
ಹೌದಮ್ಮಾ, ನಾನು ಹೇಳ್ತಿರೋದು ನಿಜ. ಮೊದಲಾದರೆ ನೀನು ಕೇವಲ ದೋಸ್ತ್ ಮಾತ್ರ ಆಗಿದ್ದೆ. ಆದರೆ ಅದ್ಯಾವುದೋ ತಿರುವಿನಲಿ ಇಬ್ಬರೂ ನಿಂತು ಒಬ್ಬರನೊಬ್ಬರು ಅರಿಯಲು ಆರಂಭಿಸಿದಾಗ ದೋಸ್ತಿಯೇ ಪ್ರೀತಿಯೆಂಬ ಮಾಯೆಗೆ ಬದಲಾಯಿತು. ಅಲ್ಲಿಗೆ ನೀನು ದೋಸ್ತ್ ದೋಸ್ತ್ ನಾ ರಹಾ!
ಅಷ್ಟಕ್ಕೂ ನಮ್ಮನ್ನು ಇಷ್ಟು ಆಪ್ತವಾಗಿಸಿದ ವಿಷಯಗಳ ಬಗ್ಗೆ ಯೋಚಿಸಿದರೆ ನಾವಿಬ್ಬರೂ ಒಂದಾಗುವುದು ಕೇವಲ ಸಾಹಿತ್ಯದಲ್ಲಿ ಮಾತ್ರ. ನಿನಗೆ ಶೇಕ್ಸ್ ಪಿಯರ್ ಇಷ್ಟವಾಗುತ್ತಾನೆ. ನನಗೆ ಪೌಲೋ ಕೊಹೆಲೋ ಇಷ್ಟವಾಗುತ್ತಾನೆ. ಉಳಿದಂತೆ ನಾವಿಬ್ಬರೂ ವಿರುದ್ಧ ಧ್ರುವಗಳು. ಎಲ್ಲಿಯೂ ಯಾವುದೇ ವಿಷಯದಲ್ಲೂ ನಾವು ಒಂದಾಗುವುದೇ ಇಲ್ಲ. ಆದರೆ ಪರಸ್ಪರ ಗೌರವ, ಹದ ಮೀರದ ಪ್ರೀತಿ, ಇದೆಲ್ಲಕ್ಕೂ ಮಿಗಿಲಾಗಿ ಎರಡೂ ಮನೆಯವರ ಶುಭಾಶೀರ್ವಾದ. ನಮ್ಮ ಪ್ರೀತಿ ಹಸನಾಗಲು ಇದಕ್ಕಿಂತ ಹೆಚ್ಚಿನದು ಇನ್ಯಾವುದು ಬೇಕು ಹೇಳು.
ಯಾವುದೇ ವಿಷಯಗಳು ಬಂದರೂ ಅದನ್ನು ಮಾತಿಗೆ ಮಾತು ಬೆಳೆಸಿ ಹಟಕ್ಕೆ ಬಿದ್ದು ಚರ್ಚಿಸುತ್ತೇವೆ. ಅದೆಷ್ಟು ಫೋನ್ ಕಾಲ್, ಅದೆಷ್ಟು ಎಸ್‌ಎಂಎಸ್!
ಗೆಳತೀ ಮುಂದಿನ ಶನಿವಾರ ವ್ಯಾಲೆಂಟೈನ್ಸ್ ಡೇ. ಕಳೆದ ವ್ಯಾಲೆಂಟೈನ್ ಡೇಗೆ ನಾವು ನಿನ್ನೂರ ಬೀಚ್‌ನಲ್ಲಿದ್ದೆವು. ನಮಗೆ ಎಲ್ಲಾ ದಿನವೂ ವಿಶೇಷವೇ. ಆದರೆ ಪ್ರೀತಿಯನ್ನು ಕೇವಲ ಆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಿಸಿದ್ದಿದ್ದರೆ ನಮ್ಮ ಪ್ರೀತಿ ಹೀಗಿರುತ್ತಿತ್ತೇ ಗೆಳತೀ. ನಾವು ಪ್ರೀತಿಗೆ ಮೂಗುದಾರ ಹಾಕಲಿಲ್ಲ. ಅದು ಅದರ ಪಾಡಿಗೆ ಇರುತ್ತಿತ್ತು. ಅದಕ್ಕೇ ಈ ಬಾರಿ ವ್ಯಾಲೆಂಟೈನ್ ಡೇಗೆ ನಮ್ಮದು ದಟ್ಟ ಕಾನನದ ನಡುವಣ ಪ್ರೀತಿ. ಅದಕ್ಕೆ ನಮ್ಮಿಬ್ಬರ ಮನೆಯವರದೇ ಆತಿಥ್ಯ! ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಹೇಳು.
ಅವರೂ ಹಾಗೇನೇ,
ಬಹುತ್ ಪ್ಯಾರ್ ಕರ್‌ತೇ ಹೇ ತುಮ್‌ಕೋ ಸನಮ್
ಕಸಮ್ ಚಾಹೀ ಲೇಲೋ...

ಇಂದಿಗೂ ನಿನ್ನ ನೋಡುವಾಗಿನ ಸಡಗರ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ನಿನ್ನ ಜತೆ ಮಾತಿಗೆ ಕುಳಿತರೆ ಮಾತು ಹೊರಡುವುದಿಲ್ಲ. ನೀನು ಮಾತನಾಡುತ್ತಾ ಹೋಗುವುದಕ್ಕೆಲ್ಲಾ ನಾನು ಕಿವಿಯಾಗುತ್ತೇನೆ. ಆದರೂ ನಿನ್ನಲ್ಲಿ ಮುನಿಸಿಲ್ಲ. ಅದಕ್ಕೆ ಶನಿವಾರ ಬೆಳಗ್ಗೆ ಸೂರ್‍ಯೋದಯವಾಗುವಾವ ಹೊತ್ತಿಗೆ ದಟ್ಟ ಕಾನನದ ನಡುವೆ ಮರಗಳೆಡೆಯಿಂದ ಹೊರಸೂಸುವ ಹೊಂಗಿರಣಗಳ ಸಾಕ್ಷಿಯಾಗಿ ನಾವಿಬ್ಬರೂ ಎದುರು ಬದುರಾಗಿ ಕುಳಿತಿರುತ್ತೀವಿ. ಹಿನ್ನೆಲೆಯಲ್ಲಿ ಹಕ್ಕಿಗಳ ಕಲರವ ಇರುತ್ತೆ. ಎಲ್ಲೋ ದೂರದಲ್ಲಿ ನೀರು ಹರಿಯುವ ನಿನಾದವ ಕೇಳುತ್ತಾ ನೀ ನನ್ನ ತೋಳಿನಲ್ಲಿ ಬಂಧಿಯಾಗಿರುತ್ತೀ. ಆ ಘಳಿಗೆಗೆ ಕಾಯುತ್ತಿದ್ದಂತೆ ಆಕಾಶದಿಂದ ನಾಲ್ಕು ಹನಿ. ಅದು ಮಳೆಯೋ, ಮಂಜಿನ ಹನಿಯೋ ಅದರ ಪರಿವೆ ನಮಗೆ ಬೇಡ. ಹಾಗೆ ನಿನ್ನ ತೋಳಿಗಾನಿಸಿಕೊಂಡು ನಿಂತ ವೇಳೆಯೇ ನನ್ನ ಕೈಬೆರಳುಗಳು ನಿನ್ನ ಕೇಶರಾಶಿಯ ನಡುವೆ ಹರಿದಾಡುತ್ತಿರುತ್ತವೆ. ನಿನ್ನ ದೇಹದಲ್ಲಿ ಅದೇನೋ ಪುಳಕ. ಆದರೆ ಕಣ್ಣಲ್ಲಿ ದಿಟ್ಟ ಆತಂಕ. ಆದರೆ ನನಗೆ ನಿನ್ನ ಅರ್ಥೈಸಿಕೊಂಡು ನಿನ್ನ ತಬ್ಬಿ ಮುದ್ದು ಮಾಡುವಾಸೆ. ಅದು ನಮ್ಮ ಪಾಲಿನ ರಸ ಘಳಿಗೆ. ಇಷ್ಟು ಕಾಲ ಕಂಡ ಕನಸು ನನಸಾಗಿಸಲು ದೇವರೇ ದಯ ಮಾಡಿಸಿದ ದಿನವಿದು. ಅಂತಹ ಒಂದು ಮುಂಜಾವಿದು. ಈ ಶುಭಘಳಿಗೆಯ ನಿರೀಕ್ಷೆಯಲ್ಲಿ ನಾವು ಅದೆಷ್ಟು ವರ್ಷ ಕಾದೆವೋ ಅಲ್ಲವೇನೇ?


- ‘ನಿನ್ನ ಮಾತ್ರ’ ಪ್ರೀತಿಸುವ ಹುಡುಗ!!!

ಈ ಪ್ರೇಮಪತ್ರ ಕಡೆಯ ಅಕ್ಷರದ ತನಕವೂ ಮತ್ತೆ ಮತ್ತೆ ನೀ ಓದಿರುತ್ತೀಯಾ. ಮನದಲ್ಲಿ ಸಾವಿರ ಕನಸು ಕಟ್ಟಿಕೊಂಡವನ ಬಗ್ಗೆ ಪ್ರೀತಿ ತುಂಬಿದ ತಿರಸ್ಕಾರ ಇರುತ್ತದೆ. ಇಷ್ಟೆಲ್ಲಾ ಆದರೂ ನಿನ್ನ ಮನಸ್ಸು ಕೇಳುತ್ತೆ ಪ್ರೀತಿ ಅಂದ್ರೆ ಇಷ್ಟೂ ಪ್ರೀತ್ಸೋದಾ? ಹಾಗಾಗುತ್ತಿದ್ದಂತೆ ಹಿಂದೆ ನಾವು ಆಡಿತ ಮಾತುಗಳು ತುಂಬು ಪ್ರೀತಿಯಿಂದ ಮನದ ಮುಂದೆ ಬಿಚ್ಚಿಕೊಳ್ಳುತ್ತೆ. ಮತ್ತೆ ನೆನಪುಗಳ ನೇವರಿಸುತ್ತಾ ಕಣ್ಣ ತುಂಬಾ ಕಣ್ಣೀರಧಾರೆ. ಆದರೆ ಅದು ನಿನ್ನ ಕಣ್ಣಿಂದ ಹೊರಡುವುದಿಲ್ಲ ನಿನ್ನ ಹಟದಂತೆ. ಅದು ನನಗೆ ಅರ್ಥವಾಗುತ್ತದೆ. ಮರುಕ್ಷಣ ಕಣ್ಣೀರಿಲ್ಲದ ಉಸಿರುಗಟ್ಟಿಸುವಿಕೆ, ಜತೆಗೆ ಬಿಕ್ಕಳಿಕೆ. ಮುಂದಿನ ಪ್ರಶ್ನೆಗಳಿಗೆಲ್ಲಾ ನಿನ್ನ ಮೌನವೇ ಆಭರಣ. ಅದಕ್ಕೇನಿದ್ದರೂ ರಾತ್ರಿಯೇ ಸಮಯ. ರಾತ್ರಿ ಸೂರ್ಯ ಹುಟ್ಟುವ ವಿರುದ್ಧ ದಿಕ್ಕಿಗೆ ತಲೆದಿಂಬಿಗೊರಗಿ ತಲೆಯಾನಿಸಿದರೆ ಅಲ್ಲಿ ಕಣ್ಣೀರಧಾರೆ. ಇಷ್ಟೆಲ್ಲಾ ನಿನಗಾದರೆ ಅಲ್ಲಿಗೆ ಪಾಪಿ ಚಿರಾಯು, sorry ನನ್ನ ನಿನ್ನ ಪ್ರೀತಿ ಚಿರಾಯು!!!

Wednesday, February 04, 2009

ವೇಷದಲ್ಲೇ ಬದುಕಿನ ಪಾತ್ರ ಮುಗಿಸಿದ ಶಂಭು ಹೆಗಡೆ

(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ೪-೦೨-೨೦೦೯ರಂದು ಪ್ರಕಟವಾದ ಬರಹಗಳು. ಯಕ್ಷಗಾನದ ಮೇಲಿನ ಪ್ರೀತಿಯಿಂದ ಇದನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.)


- ಕುಣಿಯುತ್ತಲೇ ಕುಸಿದ ರಂಗದಿಗ್ಗಜ
- ಮೊದಲು ಯಕ್ಷ ಹೆಜ್ಜೆಯಿಟ್ಟ ಇಡಗುಂಜಿಯಲ್ಲೇ ಸಾವು


ಕ್ಷರಂಗದ ಅಭಿಜಾತ ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಶಂಭು ಹೆಗಡೆ ಕೆರೆಮನೆ (೭೧) ಮಂಗಳವಾರ ನಸುಕಿನಲ್ಲಿ ಇಡಗುಂಜಿಯಲ್ಲಿನ ರಂಗಸ್ಥಳದಲ್ಲೇ ಹೃದಯಾಘಾತದಿಂದ ವೀರಮರಣ ಹೊಂದಿದರು.
ತಮ್ಮ ಆರಾಧ್ಯ ದೈವ ವಿನಾಯಕನ ಸನ್ನಿಧಿಯ ಎದುರು ರಥಸಪ್ತಮಿಯ ದಿನ ಇಷ್ಟವಾದ ರಾಮನ ಪಾತ್ರ ನಿರ್ವಹಿಸಿ ಸಾವಿರಾರು ಜನರನ್ನು ರಂಜಿಸುತ್ತಲೇ ಬಣ್ಣ ಬಳಿದುಕೊಂಡು ಗೆಜ್ಜೆ ಕಟ್ಟಿಕೊಂಡು ಕಣ್ಮುಚ್ಚಿದರು. ಅಕ್ಷರಶಃ ಕೊನೆಯುಸಿರಿರುವರೆಗೆ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದರು. ಅವರಿಗೆ ಪತ್ನಿ ಗೌರಿ, ಪುತ್ರ ಶಿವಾನಂದ, ಪುತ್ರಿ ಶಾರದಾ, ಸೊಸೆ ರಾಜೇಶ್ವರಿ, ಅಪಾರ ಅಭಿಮಾನಿಗಳಿದ್ದಾರೆ.
ಮಂಗಳವಾರ ನಸುಕಿನ ವೇಳೆ ತಮಗೆ ಬಹು ಆಪ್ತವಾದ ‘ಸೀತಾ ವಿಯೋಗ’ ಪ್ರಸಂಗದಲ್ಲಿ ರಾಮನ ಪಾತ್ರದ ವೇಷ ತೊಟ್ಟು ಶಂಭು ಹೆಗಡೆ ಅತ್ಯುತ್ಸಾಹದಿಂದ ನರ್ತನ, ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದರು. ಪ್ರಸಂಗದ ಅಂತಿಮ ಹಂತದಲ್ಲಿ ನೆಬ್ಬೂರು ನಾರಾಯಣ ಭಾಗವತರು ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ’ ಎಂದು ಹಾಡು ಹೇಳುತ್ತಿದ್ದಂತೆ ಶಂಭು ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೂ ಹಾಡು ಮುಗಿದ ಮೇಲೆ ‘ಏಳಿ ಹೋಗೋಣ ಏಳಿ ಹೋಗೋಣ’ಎಂದು ಹೇಳಿದ್ದಾರೆ. ನೆಬ್ಬೂರು ಭಾಗವತರತ್ತ ತಿರುಗಿ ‘ನನ್ನ ಹತ್ರ ಇನ್ನು ಆಗ್ತಿಲ್ಲೆ, ನೀವು ಮುಗಿಸಿ’ ಎಂದವರೇ ಚೌಕಿಯತ್ತ ಹೆಜ್ಜೆ ಹಾಕಿದವರು ಕಿರೀಟ ತೆಗೆದಿಟ್ಟು ಎದೆ ಹಿಡಿದು ಮಲಗಿದರು. ಸ್ವಲ್ಪ ವಾಂತಿಯನ್ನೂ ಮಾಡಿದರು. ಅಷ್ಟರಲ್ಲಿ ಮಗ ಶಿವಾನಂದ ಹೆಗಡೆ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಪರಂಧಾಮರಾಗಿದ್ದರು. ಬಣ್ಣ ಹಚ್ಚಿಕೊಂಡೆ ಬಣ್ಣದ ಬದುಕಿಗೆ ವಿದಾಯ ಹೇಳಿದರು.
ಇಲ್ಲಿನ ಆರಾಧ್ಯ ದೈವ ಶ್ರೀ ಇಡಗುಂಜಿ ಮಹಾಗಣಪತಿ ಹೆಸರಿನಲ್ಲಿ ಸ್ಥಾಪಿಸಿದ್ದ ಯಕ್ಷಗಾನ ಮೇಳದ ಹರಕೆಯಾಟವನ್ನು ಪ್ರತಿ ವರ್ಷ ನಡೆಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದು, ಫೆ.೨ರಂದು ಇಡಗುಂಜಿಯಲ್ಲಿ ಜಾತ್ರೆ ಪ್ರಯುಕ್ತ ಸಂಜೆ ರಥೋತ್ಸವ ಕಾರ್ಯಕ್ರಮಗಳು ಮುಗಿದ ನಂತರ ರಾತ್ರಿ ೧೧ಗಂಟೆಗೆ ಜಿ.ಆರ್. ಪಾಂಡೇಶ್ವರರ ಕೃತಿ ‘ಮಾರಾವತಾರ’ಪ್ರಸಂಗವನ್ನು ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಬಳಿಕ ‘ಸೀತಾ ವಿಯೋಗ’ ಆರಂಭವಾಯಿತು.
ಕೇವಲ ೩-೪ ಜಿಲ್ಲೆಗಳಿಗೆ ಸೀಮಿತವಾಗಿದ್ದ ಯಕ್ಷಗಾನದ ವೈಭವವನ್ನು ವಿಶ್ವಾದ್ಯಂತ ಅನಾವರಣಗೊಳಿಸಿದರು. ಯಕ್ಷಗಾನದ ಸಂಪ್ರದಾಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಅರ್ಧ ಚಂದ್ರಾಕೃತಿಯ ರಂಗಸಜ್ಜಿಕೆ. ಕರುಣಾರಸಕ್ಕೆ ಸೂಕ್ತ ಅಭಿನಯ, ಮೇಳದ ಸಂಘಟನೆ, ಅಪ್ರತಿಮ ಮಾತುಗಾರಿಕೆ, ಚಿಂತನೆಗಳಿಂದ ಅಪರೂಪದ ಅಪೂರ್ವ ಕಲಾವಿದರಾಗಿದ್ದ ಶಂಭು ಹೆಗಡೆ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿದ ಸ್ಥಳದಲ್ಲೇ ಬದುಕಿನ ಕೊನೆಯ ಹೆಜ್ಜೆ ಹಾಕಿದರು.
- ಕಲಾಲೋಕಕ್ಕೆ ಮಾದರಿ: ತಂದೆ ಶಿವರಾಮ ಹೆಗಡೆ ಕೆರೆಮನೆಯವರಿಂದ ಬಳುವಳಿಯಾಗಿ ಬಂದ ಯಕ್ಷಗಾನ ಕಲಾಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡರು. ಶ್ರೀಮಯ ಯಕ್ಷಗಾನ ಕಲಾ ತರಬೇತಿ ಕೇಂದ್ರದ ಸಾರಥ್ಯ ವಹಿಸಿ, ತಂದೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಗಮನ ಸೆಳೆಯುವ ರಂಗಮಂದಿರ ನಿರ್ಮಿಸಿ, ರಾಜ್ಯ ಯಕ್ಷಗಾನ ಜಾನಪದ ಅಕಾಡಮಿಯ ಅಧ್ಯಕ್ಷರಾಗಿ ತೆರೆಮರೆಯಲ್ಲಿರುವ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಅವರನ್ನು ಬೆಳಕಿಗೆ ತಂದು ಪ್ರೆತ್ಸಾಹಿಸಿದರು. ಶಿವರಾಮ ಹೆಗಡೆಯವರ ಹೆಸರಿನಲ್ಲಿ ನಾಡಿನ ಕಲಾವಿದರನ್ನು ಕರೆತಂದು ಸನ್ಮಾನಿಸಿ ಕಲಾಲೋಕಕ್ಕೆ ಮಾದರಿಯಾಗಿ ನಿಂತವರು.
ಆರಂಭದಲ್ಲಿ ನಾಟಕ ಪಾತ್ರಗಳನ್ನೂ ನಿರ್ವಹಿಸಿದ್ದ ಅವರು ‘ಪರ್ವ’ ಚಿತ್ರದಲ್ಲಿ ನಟಿಸಿದ ಪೋಷಕ ಪಾತ್ರಕ್ಕೆ ಪ್ರಶಸ್ತಿಯನ್ನೂ ಪಡೆದಿದ್ದರು. ಶಿವರಾಮ ಹೆಗಡೆಯವರ ಹಿರಿಯ ಮಗನಾಗಿ ೧೯೩೮ರಲ್ಲಿ ಜನಿಸಿದ ಶಂಭು ಹೆಗಡೆ ವಿವಿಧ ವೃತ್ತಿ ಮೇಳಗಳಲ್ಲಿ ತೊಡಗಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರಿಗೆ ಸಂದ ಸಂಘ- ಸಂಸ್ಥೆಗಳ ಅಸಂಖ್ಯ ಸನ್ಮಾನ ಗೌರವಗಳು ವಿರಳಶ್ರೇಣಿಯ ಪ್ರತಿಭೆಗೆ ಸಿಕ್ಕ ಪ್ರತೀಕವಾಗಿದೆ. ಅವರ ನಿಧನದಿಂದ ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯ ಪ್ರಖರ ಬೆಳಕೊಂದು ಆರಿದಂತಾಗಿದೆ.
ಅಷ್ಟೇ ಅಲ್ಲ, ಶಂಭು ಹೆಗಡೆ ನಿಧನದಿಂದ ಯಕ್ಷಲೋಕದ ಹರಿಶ್ಚಂದ್ರ, ನಳ, ಕರ್ಣ, ರಾಮನಿರ್ಯಾಣದ ರಾಮ, ಸತಿ ಸುಶೀಲೆಯ ದುರ್ಜಯ, ಕೃಷ್ಣ ಮೊದಲಾದ ಪಾತ್ರಗಳೂ ಜೀವ ಕಳೆದುಕೊಂಡಿವೆ.
ಯಕ್ಷಲೋಕದಿಂದ ನಕ್ಷತ್ರಲೋಕಕ್ಕೆ: ಕೆರೆಮನೆ ಶಂಭು ಹೆಗಡೆಯವರ ಪಾರ್ಥಿವ ಶರೀರ ಮಂಗಳವಾರ ಸಂಜೆ ೫ ಗಂಟೆಗೆ ಅವರ ಕರ್ಮಭೂಮಿ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದ ಆವರಣದಲ್ಲಿ ಸಿದ್ಧಪಡಿಸಲಾಗಿದ್ದ ಚಿತೆಯಲ್ಲಿ ಪಂಚಭೂತಗಳಲ್ಲಿ ಲೀನವಾಯಿತು.
ಶಂಭು ಹೆಗಡೆಯವರ ಪುತ್ರ ಶಿವಾನಂದ ಹೆಗಡೆ ತಮ್ಮ ತೀರ್ಥರೂಪರ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿಪೂರ್ವಕ ಅಗ್ನಿಸ್ಪರ್ಶ ಮಾಡಿದರು.
ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್, ಬಳ್ಕೂರು ಕೃಷ್ಣ ಯಾಜಿ, ಪಂ. ಪರಮೇಶ್ವರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೊಳ್ಯೂರು ರಾಮಚಂದ್ರ ರಾವ್, ಕಪ್ಪಕೆರೆ ಸುಬ್ರಾಯ ಭಾಗ್ವತ್, ಭಾಸ್ಕರ ಜೋಷಿ, ಬಿ.ಪಿ. ನಾಯಕ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪಾ, ಲಕ್ಷ್ಮೀನಾರಾಯಣ ಕಾಶಿ ಶಿವಮೊಗ್ಗಾ ಮತ್ತಿತರ ಗಣ್ಯರು, ಕಲಾವಿದರು, ಅಭಿಮಾನಿಗಳು ಶಂಭು ಹೆಗಡೆಯವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಹಿರಿಯ ಕಲಾವಿದನ ನಿಧನಕ್ಕೆ ಕಂಬನಿ ಮಿಡಿದರು.

ಬೇಗ ಮುಗಿಸೋ, ಎನ್ನತ್ರ ಆಗ್ತಿಲ್ಲೆ...

ಕುಣಿಯುವಾಗಲೇ ಬಂದಿತ್ತು ನೋಡಾ ಸಾವು
-ವಸಂತಕುಮಾರ್ ಕತಗಾಲ
ಅದು ‘ಲವ ಕುಶರ ಕಾಳಗ’
(ಸೀತಾ ವಿಯೋಗ)ದ ಕೊನೆಯ ಸನ್ನಿವೇಶ. ಭಾಗವತ ನೆಬ್ಬೂರು ನಾರಾಯಣ ಭಾಗವತರು ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ... ನಾಳಿನ್ನೂ ಸೌಖ್ಯವಾ ಪಡೆಯಬಹುದು’ ಎಂಬ ಹಾಡಿಗೆ ಕುಣಿದ ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ನೀರು ಕುಡಿದು ಬಂದ ಶಂಭು ಹೆಗಡೆ ನೆಬ್ಬೂರು ಅವರತ್ತ ತಿರುಗಿ ‘ಬೇಗ ಮುಗಿಸು ನನ್ನತ್ರ ಆಗ್ತಿಲ್ಲೆ’ ಎಂದು ಚೌಕಿಗೆ ಬಳಲುತ್ತ ಸಾಗಿ ಇನ್ನಿಲ್ಲವಾದರು.
ಹೌದು, ಯಕ್ಷರಂಗದ ಮೇರು ನಟ ಶಂಭು ಹೆಗಡೆ ಕೊನೆಯುಸಿರೆಳೆಯುವಾಗ ಇತ್ತ ಪ್ರಸಂಗವೂ ಮುಗಿದಿತ್ತು. ರಂಗಸ್ಥಳ ಹಾಗೂ ಚೌಕಿಯಲ್ಲಿನ ವಿದ್ಯಮಾನಗಳನ್ನು ಗಮನಿಸಿದಾಗ ಶಂಭು ಹೆಗಡೆ ಅವರಿಗೆ ಸಾವಿನ ಮುನ್ಸೂಚನೆ ಇತ್ತೇ ಅಥವಾ ಕಾಕತಾಳೀಯವೇ ಎನ್ನುವ ಶಂಕೆ ಕಾಡದಿರದು.
ಸೋಮವಾರ ಸಂಜೆ ಚೌಕಿಗೆ ಬಂದ ಶಂಭು ಹೆಗಡೆ ತಮ್ಮ ಮೇಳದ ಭಾಗವತ, ಆಪ್ತ ನೆಬ್ಬೂರು ನಾರಾಯಣ ಭಾಗವತ ಅವರಲ್ಲಿ ಬಂದು ‘ನಾರಾಯಣ ನನಗೂ ವಯಸ್ಸು ಆತು. ನಿನಗೂ ವಯಸ್ಸು ಆತು. ಇನ್ನು ಎಷ್ಟು ದಿನ ಕುಣಿತ್ವ ಗೊತ್ತಿಲ್ಲೆ. ಅದಕ್ಕೆ ಒಂದು ದಾಖಲೆ ಇರ್ಲಿ ಹೇಳಿ ಇಡೀ ಆಟ ವೀಡಿಯೋ ರೆಕಾರ್ಡಿಂಗ್ ಮಾಡ್ಸುಲೆ ಹೇಳಿದ್ದೆ’ ಎಂದರು. ನೆಬ್ಬೂರರು ತಲೆ ಅಲ್ಲಾಡಿಸಿ, ಹೌದು ಒಂದು ದಾಖಲೆ ಇರಬೇಕು ಎಂದಿದ್ದರು.
ಲವ- ಕುಶರ ಕಾಳಗದಲ್ಲಿ ಮಗ ಶಿವಾನಂದ ಹೆಗಡೆ ಶತ್ರುಘ್ನನ ಪಾತ್ರ ವಹಿಸಿದ್ದರು. ಯಕ್ಷಗಾನ ಕೇಂದ್ರದ ಸದಾಶಿವ ಕುಶನ ಪಾತ್ರ, ಉದಯ ಹೆಗಡೆ ಮಾಳ್ಕೋಡು ಲವನ ಪಾತ್ರ ವಹಿಸಿದ್ದರು. ಪರಮೇಶ್ವರ ಹೆಗಡೆ ಮೃದಂಗ ಹಾಗೂ ಗಜಾನನ ಹೆಗಡೆ ಚೆಂಡೆ ವಾದಕರಾಗಿದ್ದರು. ಶಿವಾನಂದ ಹೆಗಡೆ ಪಾತ್ರ ಮುಗಿಸಿ ಆಟ (ಯಕ್ಷಗಾನ) ನೋಡುತ್ತಿದ್ದರು.
ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಎಂದಿಗಿಂತ ಲವಲವಿಕೆಯಿಂದ ನರ್ತಿಸುತ್ತಿದ್ದರು. ಪ್ರೇಕ್ಷಕರಿಂದ ಚಪ್ಪಾಳೆಯೂ ಆಗಾಗ ಕೇಳಿಬರುತ್ತಿತ್ತು. ಶಂಭು ಹೆಗಡೆ ಅವರಿಗೆ ಆಯಾಸವಾದೀತು ಎಂದು ನೆಬ್ಬೂರು ಭಾಗವತರು ಹಾಡನ್ನು ಮುಗಿಸಲು ಅನುವಾದಾಗಲೆಲ್ಲ ಮತ್ತೆ ಮತ್ತೆ ಹಾಡನ್ನು ಎತ್ತಿ ಹೇಳಿ ವಿವಿಧ ಭಂಗಿಯಲ್ಲಿ ಕುಣಿದರು. ತಮ್ಮ ಅಸ್ಖಲಿತ ಮಾತಿನಿಂದ ಗಮನ ಸೆಳೆಯುತ್ತಿದ್ದರು.
ಕುಶನೊಂದಿಗೆ ಯುದ್ಧಕ್ಕೆ ಅನುವಾದ ಸನ್ನಿವೇಶ. ಶಂಭು ಹೆಗಡೆ ಸಾವಿಗೆ ಕೇವಲ ಐದು ನಿಮಿಷಗಳ ಮುನ್ನ ನಡೆದ ಮಾತುಕತೆ, ಯುದ್ಧಕ್ಕೆ ಬಂದ ರಾಮನಿಗೆ ಕುಶನ ಪಾತ್ರದಲ್ಲಿದ್ದ ಸದಾಶಿವ ‘ನೀನು ವೀರನಾಗಿ ಇಲ್ಲಿಗೆ ಬಂದಿದ್ದೀಯ. ಆದರೆ ಹೋಗುವಾಗ ಹೇಡಿಯಂತೆ ಹೋಗುವೆ’ ಎಂದರು. ತಕ್ಷಣ ಶಂಭು ಹೆಗಡೆ ‘ನಾನು ಬರವಾಗಲೂ ವೀರನೇ. ಹೋಗುವಾಗಲೂ ವೀರನೇ. ರಣಹೇಡಿಯಂತೆ ಎಂದೂ ಹೋಗಲಾರೆ. ನಾನು ಎಲ್ಲಿದ್ದರೂ ವೀರನಾಗಿಯೇ ಇರುತ್ತೇನೆ’ ಎಂದರು.
ಅಷ್ಟರಲ್ಲಿ ಭಾಗವತರು ‘ಏಳಿ ಪೋಗುವ ಮುನಿಪನಿದ್ದೆಡೆಗೆ..’ ಎಂದು ಹಾಡತೊಡಗಿದರು. ಹಾಡು ಮುಗಿಸುವ ಮುನ್ನ ಶಂಭು ಹೆಗಡೆ ಚೌಕಿಗೆ ಹೋಗಿ ನೀರು ಕುಡಿದು ಬಂದರು. ಆಗಲೇ ಹೆಗಡೆ ಅವರ ದೇಹ ಕಂಪಿಸತೊಡಗಿತ್ತು. ಆದರೂ ಸಾವರಿಸಿಕೊಂಡು ‘ಏಳಿ ಹೋಗೋಣ ಏಳಿ ಹೋಗೋಣ’ ಎಂದು ಲವ ಕುಶರಿಗೆ ಹೇಳಿದರು. ಬೇಗ ಮುಗಿಸಿ ನನ್ನಿಂದ ಆಗದು ಎಂದು ಭಾಗವತರಿಗೆ ತಿಳಿಸಿ ಚೌಕಿಗೆ ಹೋದರು.
ಕೊನೆಯ ಸನ್ನಿವೇಶವಾಗಿದ್ದರಿಂದ ಮತ್ತೆ ಎರಡೆ ನಿಮಿಷದಲ್ಲಿ ಯಕ್ಷಗಾನ ಮುಗಿಯಿತು. ಅಷ್ಟರಲ್ಲಿ ಚೌಕಿಯಲ್ಲಿ ಶಂಭು ಹೆಗಡೆ ಎದೆನೋವಿನಿಂದ ಬಳಲುತ್ತಿದ್ದರು. ಸುದ್ದಿ ತಿಳಿದು ಎಲ್ಲರೂ ಚೌಕಿಯತ್ತ ಮುಗಿಬಿದ್ದರು. ಆದರೆ ತರಾತುರಿಯಿಂದ ಹಚ್ಚಿದ ಬಣ್ಣದಲ್ಲೇ ಶಂಭು ಹೆಗಡೆ ಅವರನ್ನು ಶಿವಾನಂದ ಹೆಗಡೆ ಕಾರಿನಲ್ಲಿ ಹೊನ್ನಾವರ ಆಸ್ಪತ್ರೆಯತ್ತ ಕರೆದೊಯ್ದರು. ಅಲ್ಲಿಗೆ ಶಂಭು ಹೆಗಡೆ ಅವರ ‘ಪರ್ವ’ ಮುಕ್ತಾಯವಾಗಿತ್ತು.

ಅವರೊಂದಿಗೆ ಗೆಜ್ಜೆ ಕಟ್ಟಿ ಕುಣಿವ ಆಸೆ ಈಡೇರಲೇ ಇಲ್ಲ...
- ನನ್ನ ಹಾಗೂ ಶಂಭು ಹೆಗಡೆ ನಡುವೆ ಯಾವುದೇ ದ್ವೇಷವಾಗಲಿ, ಸಿಟ್ಟು ಸಿಡುಕಾಗಲಿ, ಅಸೂಯೆಯಾಗಲಿ ಇರಲಿಲ್ಲ: ಚಿಟ್ಟಾಣಿ ರಾಮಚಂದ್ರ ಹೆಗಡೆ
ಬಡಗುತಿಟ್ಟು ಯಕ್ಷರಂಗದಲ್ಲಿ ಚಿಟ್ಟಾಣಿ ಮತ್ತು ಶಂಭುಹೆಗಡೆ ಎರಡು ಮೇರು ತಾರೆಗಳು. ಇವರಿಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ವೈಷಮ್ಯ ಇಲ್ಲದಿದ್ದರೂ ಪ್ರೇಕ್ಷಕ ವರ್ಗದಲ್ಲಿ ಮಾತ್ರ ಅದು ಹೇಗೋ ಎರಡು ವರ್ಗ ಸೃಷ್ಟಿಯಾಗಿಬಿಟ್ಟಿತ್ತು.
ತಮ್ಮ ಹಾಗು ಶಂಭು ಹೆಗಡೆ ನಡುವಿನ ಒಡನಾಟವನ್ನು ಚಿಟ್ಟಾಣಿ ಇಲ್ಲಿ ಬಿಚ್ಚಿಟ್ಟಿದ್ದಾರೆ.





- ಚಿಟ್ಟಾಣಿ ರಾಮಚಂದ್ರ ಹೆಗಡೆ
ಕೋಟಿಗೊಬ್ಬ ಕಲಾವಿದ ಶಂಭು ಹೆಗಡೆ. ಅಂತಹ ಕಲಾವಿದ ಶಂಭು ಅವರೊಂದಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಬೇಕೆಂಬ ಆಸೆ ಕೊನೆಗೂ ಈಡೇರಲಿಲ್ಲ. ಅದಕ್ಕೆ ವಿಧಿ ಅವಕಾಶವನ್ನೇ ಕೊಡಲಿಲ್ಲ.
ಕರುಣ ರಸದ ಅಭಿವ್ಯಕ್ತಿಯಲ್ಲಿ ಮೇರು ಸದೃಶರಾಗಿದ್ದ ಶಂಭು ಹೆಗಡೆ ಅವರ ಗೆಜ್ಜೆಯ ನಾದ, ಹೆಜ್ಜೆಯ ಸದ್ದು ಕಲಾಭಿಮಾನಿಯ ಹೃದಯದಲ್ಲಿ ಅಚ್ಚೊತ್ತಿದೆ. ಅವರು ರಾಮನಾಗಿಯೇ ಹೊರಟರು. ಅದೂ ರಥಸಪ್ತಮಿ, ಆರಾಧ್ಯದೇವ ಇಡಗುಂಜಿ ವಿನಾಯಕನ ಸನ್ನಿಧಿ, ಮೇಲಾಗಿ ಬಣ್ಣ ಬಳಿದುಕೊಂಡೇ ಬದುಕಿಗೆ ವಿದಾಯ ಹೇಳಿದರು. ಇಂತಹ ಮರಣ ಮಹಾತ್ಮರಿಗಲ್ಲದೆ ಮತ್ತಿನ್ನಾರಿಗೆ ಬರಲು ಸಾಧ್ಯ? ನಸುಕಿನ ಜಾವ ನಿದ್ದೆಯಲ್ಲಿದ್ದ ನನಗೆ ಅವರ ನಿಧನದ ಸುದ್ದಿ ಬಡಿದೆಬ್ಬಿಸಿತು. ಆ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು.
ಕ್ರಮೇಣ ನನ್ನ ಅವರ ಒಡನಾಟ, ಅವರ ಪಾತ್ರ ಚಿತ್ರಣ ಇವೆಲ್ಲವುಗಳ ಬಗ್ಗೆ ಮನಸ್ಸು ಮೆಲಕು ಹಾಕಿತು. ಹೌದು, ಯಕ್ಷರಂಗದಲ್ಲಿ ನನ್ನ ಬೆಳವಣಿಗೆಗೆ ಶಂಭು ಹೆಗಡೆ ಸಹ ಕಾರಣರು. ಹಾಗೆ ಅವರ ಬೆಳವಣಿಗೆಗೂ ನಾನೂ ಒಂದು ಕಾರಣ ಎಂದು ನಾನು ನಂಬಿದ್ದೇನೆ. ಒಬ್ಬ ಪ್ರಬಲ ಪ್ರತಿಸ್ಪರ್ಧಿ ಇದ್ದಾಗ ಮಾತ್ರ ಇನ್ನೊಬ್ಬ ಮೇಲೆ ಬರಲು ಸಾಧ್ಯ. ನಿಜಕ್ಕೂ ಹೇಳಬೇಕೆಂದರೆ ವೈಯಕ್ತಿಕ ನೆಲೆಯಲ್ಲಿ ನನ್ನ ಹಾಗೂ ಶಂಭು ಹೆಗಡೆ ನಡುವೆ ಯಾವುದೇ ದ್ವೇಷವಾಗಲಿ, ಸಿಟ್ಟು ಸಿಡುಕಾಗಲಿ, ಅಸೂಯೆಯಾಗಲಿ ಇರಲಿಲ್ಲ. ಆದರೆ ಪ್ರೇಕ್ಷಕರಲ್ಲಿ ಮಾತ್ರ ಅದು ಹೇಗೋ ಎರಡು ವರ್ಗ ಸೃಷ್ಟಿಯಾಗಿದ್ದು ಮಾತ್ರ ಸುಳ್ಳಲ್ಲ. ಬಹುಶಃ ನಾನು ಹಾಗೂ ಶಂಭು ಒಟ್ಟಿಗೆ ಗೆಜ್ಜೆ ಕಟ್ಟದಿರಲು ಇದೂ ಕಾರಣವಿರಬೇಕು.
- ನಮ್ಮಲ್ಲಿ ದ್ವೇಷವಿರಲಿಲ್ಲ: ನನಗಂತೂ ಅವರೊಂದಿಗೆ ಹೆಜ್ಜೆ ಹಾಕಬೇಕೆಂದು ಅತೀವ ಆಸೆ ಇತ್ತು. ಇದಕ್ಕಾಗಿ ಹಲವರ ಪ್ರಯತ್ನ ಕೂಡ ನಡೆಯಿತು. ನಾನೂ ಒಮ್ಮೆ ಅವರಲ್ಲಿ ಹೇಳಿದ್ದೆ. ನನಗೆ ಬೇರೇನೂ ಆಸೆ ಇಲ್ಲ. ಒಮ್ಮೆ ನಿಮ್ಮೊಂದಿಗೆ ಕುಣಿಯಬೇಕು ಎಂದಿದ್ದೆ. ಆದರೆ ಕಾಲ ಕೂಡಿ ಬರಲಿಲ್ಲ. ಆ ಆಸೆ ಮರೀಚಿಕೆಯಾಗಿಯೇ ಉಳಿಯಿತು. ಆದರೆ ಅವರೆಂದೂ ನನ್ನನ್ನು ದೂರಿಲ್ಲ. ನಾನೂ ಅವರ ಬಗ್ಗೆ ದೂರಲಿಲ್ಲ. ನಾನು ಮತ್ತು ಅವರು ಸಾರ್ವಜನಿಕವಾಗಿ ಒಟ್ಟಿಗೆ ಸೇರಿದ್ದು ತುಂಬ ವಿರಳ. ಕೆಲ ವರ್ಷಗಳ ಹಿಂದೆ ಶಿವಮೊಗ್ಗದ ಸಮಾರಂಭದಲ್ಲಿ ಸೇರಿದ್ದೆವು. ಆತ್ಮೀಯತೆಯಿಂದ ಮಾತನಾಡಿದೆವು. ತರುವಾಯ ಅಂದರೆ ಕಳೆದ ಎರಡು ವರ್ಷಗಳ ಹಿಂದೆ ಶಿರಸಿ ಸಮೀಪದ ಬಕ್ಕಳದಲ್ಲಿ ನಮ್ಮಿಬ್ಬರಿಗೂ ಸನ್ಮಾನ ಏರ್ಪಡಿಸಲಾಗಿತ್ತು. ಸಂಘಟಕರು ಶಂಭು ಹೆಗಡೆ ಅವರನ್ನು ಮೊದಲು ಕರೆದರು. ಆಗ ಶಂಭು ಹೆಗಡೆ, ‘ಚಿಟ್ಟಾಣಿ ನನಗಿಂತ ಹಿರಿಯರು. ದೊಡ್ಡ ನಟರು ಅವರಿಗೆ ಮೊದಲು ಸನ್ಮಾನ ಮಾಡಬೇಕಿತ್ತು’ ಎಂದಿದ್ದರು ವಿಶಾಲ ಹೃದಯಿ ಶಂಭು ಹೆಗಡೆ. ನನಗೂ ಇದು ಖುಷಿ ತಂದಿತ್ತು.
ಇದಕ್ಕೂ ಮುನ್ನ ಕಾರವಾರದ ಸಮಾರಂಭದಲ್ಲಿ ಒಟ್ಟಿಗೆ ಸೇರಿದ್ದೆವು. ಆಗ ಯಕ್ಷಗಾನದ ಆಗುಹೋಗುಗಳ ಬಗ್ಗೆ ಇಬ್ಬರೂ ಸುದೀರ್ಘವಾಗಿ ಸಮಾಲೋಚನೆ ನಡೆಸಿದೆವು. ಕಲೆ ನಡೆಯುತ್ತಿರುವ ದಾರಿಯ ಬಗ್ಗೆ ಆತಂಕವೂ ಉಂಟಾಯಿತು.
ತೀರಾ ಈಚೆಗೆ ಅಂದರೆ, ಕಳೆದ ಜ.೩೦ರಂದು ಕುಮಟಾದಲ್ಲಿ ಒಟ್ಟಿಗೆ ಸೇರಿದ್ದೆವು. ನಾನು ಇದ್ದ ರೂಮಿನಲ್ಲಿ ಇತರ ಗಣ್ಯರೂ ಇದ್ದರು. ನನಗೆ ಬೀಡಿ ಸೇದದೆ ತುಂಬ ಸಮಯವಾಗಿತ್ತು. ಶಂಭು ಹೆಗಡೆ ನನ್ನಲ್ಲಿ ಬಂದು ತಮ್ಮ ರೂಮಿಗೆ ಬಾ ಎಂದು ಕರೆದೊಯ್ದರು. ‘ನಿಮ್ಗೆ ಏನೋ ತೊಂದ್ರೆ ಆತು ಅನ್ಸ್ತು. ನಂಗೇನೂ ತೊಂದ್ರೆ ಇಲ್ಲೆ, ಇಲ್ಲಿ ಬೀಡಿ ಸೇದಿ’ ಎಂದರು. ಅವರೊಂದಿಗೆ ಹರಟುತ್ತ ಬೀಡಿ ಸೇದಿದೆ. ಅದೆಲ್ಲ ಈಗ ನೆನಪು ಮಾತ್ರ.
- ಹೊಸತನದ ಹರಿಕಾರ: ಯಕ್ಷರಂಗದಲ್ಲಿ ಅವರ ಬಗ್ಗೆ ಹೇಳುವುದಾದರೆ, ನಾನು ಅವರ ಕೆಲ ಪಾತ್ರಗಳನ್ನು ನೋಡಿದ್ದೇನೆ. ಅವರ ಕರ್ಣ, ಕೃಷ್ಣ, ಮಾಗಧ, ಕಾರ್ತವೀರ್ಯ, ರಾಮ, ಹರಿಶ್ಚಂದ್ರನ ಪಾತ್ರಗಳು ಈಗಲೂ ನನ್ನ ಕಣ್ಮುಂದೆ ಇವೆ. ಶಿರಸಿ ಜಾತ್ರೆ ಸಂದರ್ಭದಲ್ಲಿ ರಾಮ ನಿರ್ಯಾಣದ ರಾಮನ ಪಾತ್ರವಂತೂ ಅದ್ಭುತ. ಅಲ್ಲಿ ದೂರ್ವಾಸರನ್ನು ಒಂದೆಡೆ ಸಂಭ್ರಮದಿಂದ ಸ್ವಾಗತಿಸಬೇಕು, ಅದೇ ಸಂದರ್ಭದಲ್ಲಿ ತಮ್ಮ ಲಕ್ಷ್ಮಣನಿಗೆ (ನೋವಿನಿಂದ) ಮರಣದಂಡನೆ ವಿಧಿಸಬೇಕು. ಈ ಸನ್ನಿವೇಶದ ನಡುವಣ ಪಾತ್ರ ಚಿತ್ರಣ ಶಂಭು ಹೆಗಡೆ ಅವರಿಂದ ಮಾತ್ರ ಸಾಧ್ಯ. ಸ್ಮಶಾನ ಕಾಯುವ ಹರಿಶ್ಚಂದ್ರನ ಪಾತ್ರವನ್ನು ಹೃದಯಕ್ಕೆ ತಟ್ಟುವಂತೆ ಅನಾವರಣ ಮಾಡುವ ಕಲೆ ಅವರಲ್ಲಿ ಮಾತ್ರ ಇತ್ತು.
ಒಮ್ಮೆ ಶಂಭು ಹೆಗಡೆ ನನ್ನಲ್ಲಿ ಹೇಳಿದ್ದು ನೆನಪಿದೆ- ‘ಕರುಣ ರಸಕ್ಕೆ ಕುಣಿದು ನಾನು ಹೊಸ ಪ್ರಯೋಗ ಮಾಡಿದ್ದೇನೆ’ ಎಂದಿದ್ದರು. ಹೌದು, ಅವರು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಗೆದ್ದರು. ಕೋರಿಯೋಗ್ರಫಿ ಅಳವಡಿಸಿಕೊಂಡರು. ಅಗಾಧ ಪಾಂಡಿತ್ಯ, ಚಾಣಾಕ್ಷರಾಗಿದ್ದ ಅವರನ್ನು ಕಳೆದುಕೊಂಡಿದ್ದರಿಂದ ಆಘಾತ ಉಂಟಾಗಿದೆ. ತುಂಬಾ ಪಶ್ಚಾತ್ತಾಪ ಆಗಿದೆ. ಅವರು ನೂರು ವರ್ಷ ಬದುಕಬೇಕಿತ್ತು.
- ಬರಹ ರೂಪ: ವಸಂತಕುಮಾರ್ ಕತಗಾಲ

ಕೃಪೆ- ಕನ್ನಡಪ್ರಭ
ಚಿತ್ರಕೃಪೆ-
http://keremane.blogspot.com/

Monday, December 08, 2008

ನವಿರು ಸಾಲುಗಳು ಕೇವಲ ನನಗಾಗಿ...

ಗತ ನೆನಪು ಶತ ನೆನಪು
ಇಂದಿಗೂ ಎಲ್ಲಾ ಒನಪು

ಸಂಭ್ರಮದ ಸಂತಸದಿ
ಮನವಿಂದು ನಗುತಿರಲು
ಸುಖ ದುಃಖವೆಲ್ಲಾ ಮರೆಯಾದವೋ
ಇಲ್ಲ ಮರುಕಳಿಸ್ಯಾವೋ?

ಸಂಭ್ರಮವು ಸೂತಕವು
ಮನವ ಚುಚ್ಚುತಿರಲು
ಬದುಕೆಂಬ ಮೂರಕ್ಷರ
ಆರುತಿಹುದು

ಗತ ನೆನಪು ಶತ ನೆನಪು
ಇಂದಿಗೂ ಎಲ್ಲಾ ಒನಪು

20/03/2006

ಇದು ಎಂಸಿಜೆ ಎಂಬ ಪತ್ರಿಕೋದ್ಯಮ ಕೋರ್ಸ್ ಮಾಡುತ್ತಿದ್ದ ಸಂದರ್ಭ ಬೆಳಗ್ಗಿನ ಆರಂಭದ ಮಹಾ ಬೋರಿಂಗ್ ಕ್ಲಾಸ್‌ನಲ್ಲಿ ಬರೆದದ್ದು. ಇದಕ್ಕೆ ಕವಿತೆ, ಕವನ ಎಂದು ಹೆಸರಿಟ್ಟು ಕೊಂಡು ಯಾವುದೇ ರೀತಿಯಲ್ಲೂ ಕವಿಯಾಗಲು ನಾನು ಹೊರಡುವುದಿಲ್ಲ. ಇದು ಮನಸಿನ ಪರಿಶುದ್ಧ ಭಾವನೆಗಳು. ಅರ್ಥಾತ್ ಮೈ ಫೀಲಿಂಗ್ಸ್.
ಯಾಕೆ ಮನಸ್ಸಿನ ಭಾವನೆಗಳು ಈ ರೀತಿ ಅಂದು ಅಕ್ಷರ ರೂಪ ಪಡೆದವು ಎನ್ನುವುದು ಇಂದಿಗೂ ಗೊತ್ತಿಲ್ಲ. ಆದರೆ ಇಂತಹ ಇನ್ನೂ ಹಲವು ಸಾಲುಗಳು ನನ್ನ ಹಲವಾರು ನೋಟ್ಸ್‌ಗಳಲ್ಲಿ ಸಿಗುತ್ತವೆ. ಆದರೆ ಆಗ ಬರೆದಿದ್ದ ಒಂದು ನೋಟ್ ಬುಕ್ ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಅದು ಸಿಕ್ಕಿದರೆ ಮರುಭೂಮಿಯ ಓಯಸಿಸ್ ನಾನಾಗುತ್ತೇನೆ. ಅದಕ್ಕೇ ಈಗ ಹುಡುಕಾಟದ ಹಾದಿ. ಮುಂದಿನ ಸಾರಿ ಮಂಗಳೂರಿಗೆ ಹೋದಾಗ ನಾನು ಮಂಗಳೂರಿನ ಯುನಿವರ್ಸಿಟಿಯಲ್ಲಿರುವಾಗ ಪೇಯಿಂಗ್ ಗೆಸ್ಟ್ ಆಗಿದ್ದಾಗ ಇದ್ದ ಮನೆಗೆ ಹೋಗಬೇಕು. ಅಲ್ಲಿ ನನ್ನ ಹಲವು ನೋಟ್ಸ್‌ಗಳಿವೆ. ಆ ಮನೆಯಲ್ಲಿ ಅಭಿಯಿದ್ದಾಳೆ, ಅನಿ ಇದ್ದಾನೆ. ಪ್ರೀತಿಯಿಂದ ನೋಡಿಕೊಂಡ ರೇವತಿ ಅಕ್ಕ, ಉದಯ್ ಇದ್ದಾರೆ. ಜತೆಗೆ ನನ್ನದೇ ಓರಗೆಯವಳಾದ ವಾಣಿ ಇದ್ದಾಳೆ. ಜತೆಗೆ ಕೆಲವು ಸುಂದರ ನೆನಪುಗಳಿವೆ. ಕೆಲವು ಭಯಾನಕ ರಾತ್ರಿಯ ಕಾಲ್ನಡಿಗೆಗಳಿವೆ. ಅವುಗಳು ಕೇವಲ ರಹಸ್ಯಗಳು.
ಅಷ್ಟಕ್ಕೂ ಈ ಅಕ್ಷರ ಸಾಲುಗಳನ್ನು ನಿಮ್ಮ ಮುಂದೆ ಇಟ್ಟು ನಾನು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತದೆ. ಸಾಧನೆ ಎನ್ನುವುದು ಏನೂ ಮಾಡಲಾಗದಿದ್ದರೂ ನಾನು ಇಂತಹ ಹಲವು ಮಜಲುಗಳನ್ನು ದಾಟಿ ಬಂದೆ ಎನ್ನುವ ಖುಷಿಯಿದೆ. ಅಷ್ಟಕ್ಕೂ ನನ್ನಲ್ಲಿರುವ ಈ ಅಕ್ಷರ ಬೆಳೆಯ ಬಗ್ಗೆ ಗೊತ್ತಿರುವುದು ಕೆಲ ವ್ಯಕ್ತಿಗಳಿಗೆ ಮಾತ್ರ.

ಕವಿತೆಗಳು ನನ್ನನ್ನು ಯಾವತ್ತೂ ಬರೆಯಲೇ ಬೇಕು ಎಂದು ಒತ್ತಡ ಹೇರಿಲ್ಲ. ನಿನಗೆ ಬರೆಯುವ ಶಕ್ತಿಯಿದೆ ಅದಕ್ಕೋಸ್ಕರವಾದರೂ ನೀನು ಬರೆಯಲೇಬೇಕು ಎಂದು ಯಾವತ್ತೂ ಅನಿಸಿಲ್ಲ. ಹಾಗಂತ ಭಾವನೆಗಳು ಯಾವತ್ತೂ ನನ್ನನ್ನು ಕಟ್ಟಿ ಹಾಕಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಇರುವಂತೆ ಸುಖ ದುಃಖ, ನೋವು, ನಲಿವು ಎಲ್ಲವೂ ಜೀವನದಲ್ಲಿ ಲಭಿಸಿದವು. ಆದರೂ ಇದೆಲ್ಲಾ ಬರೆದೆ. ಯಾಕೆ ಎಂದು ಮಾತ್ರ ಕೇಳಬೇಡಿ. ಎಂಸಿಜೆ ಕ್ಲಾಸಿನ ಕೆಲವರ ಬೋರಿಂಗ್ ಕ್ಲಾಸ್ ಲೈಕ್ ‘ಥಿಂಗ್ಸ್’ನಲ್ಲಿ ಕೂತರೆ ಯಾವತ್ತಿಗೂ ಕ್ಲಾಸ್ ಕೇಳಿಯೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದೊಂದು ಕ್ಲಾಸ್ ಎಂದು ಅನಿಸಲೇ ಇಲ್ಲ. ಆ ಕ್ಲಾಸಿನಲ್ಲೇ ಕೆಲವು ಅಸೈನ್‌ಮೆಂಟ್‌ಗಳು ಮುಗಿದು ಹೋಗುತ್ತಿದ್ದವು.

ಹೀಗೆ ಇನ್ನೂ ಹಲವು ನೆನಪುಗಳು ಇವೆ. ಅದಕ್ಕೆ ಪ್ರತಿಯೊಂದಕ್ಕೂ ಒಂದರ ಹಿಂದೆ ಒಂದೊಂದು ಕಾರಣವಿದೆ. ಅದನ್ನು ಮುಂದೆ ಬರೆಯೋಣ. ಸದ್ಯಕ್ಕೆ ಇಷ್ಟು ಸಾಕು. ಏನಂತೀರಾ?

Friday, November 28, 2008

ಗೆಳತಿ @ 25

ದೀಪವು ನಿನ್ನದೆ, ಗಾಳಿಯು ನಿನ್ನದೇ ಆರದಿರಲಿ ಬೆಳಕು

ಸದ್ಯ ದೇಶದಲ್ಲಿ ಉಗ್ರರ ಕರಾಳ ಹಸ್ತದ ಭೀಕರತೆಯಿಂದ ಮನಸ್ಸು ಇನ್ನೂ ಹೊರಬಂದಿಲ್ಲ. ಯಾಕೋ ಗೊತ್ತಿಲ್ಲ ಕಳೆದ ಎರಡು ದಿನಗಳ ಕಾಲ ನಿರಂತರವಾಗಿ ಟಿ.ವಿ. ದೃಶ್ಯಗಳನ್ನು ನೋಡಿ ಮನಸು ಏಕೋ ತಳಮಳಗೊಂಡಿದೆ. ಹೃದಯಭಾರವಾಗಿದೆ. ಏನೇ ಇರಲಿ ಈ ಎಲ್ಲಾ ಗೊಂದಲಗಳ ಬಗ್ಗೆ ಕೆಲವೇ ದಿನಗಳಲ್ಲಿ ಬರೆಯುತ್ತೇನೆ.

ಸದ್ಯ ನನ್ನ ಗೆಳತಿ @ 25. ಜೀವನದಲ್ಲಿ ಕೆಲ ಸಾಧನೆ ಮಾಡಬೇಕು ಎಂದು ಹೊರಟವನಿಗೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಗೆಳತಿ ಅವಳು. ಅವಳ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ. ಗೆಳೆಯಾ ಜೀವನದಲ್ಲಿ ಕೋಪ ಬೇಡ, ಸಹನೆ ನಿನ್ನ ಮಂತ್ರವಾಗಲಿ ಎಂದು ಶತ ಒರಟನನ್ನು ತಿದ್ದಿ ಜೀವನದಲ್ಲಿ ಸಾಧನೆ ಮಾಡು ಎಂದು ಸದಾ ಬೆನ್ನಿಗೆ ಬಿದ್ದವಳು ನೀನು.
ದ್ವೇಷವೆಂಬ ಕ್ಷಣದ ಕೋಪ ಯಾವ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟವಳು ನೀನು. ನೀನು ಈ ರೀತಿ ವರ್ತಿಸಿದರೆ ಸರಿ ಇರಲ್ಲ, ನೀನೂ ಹೀಗೇ ಇರಬೇಕು ಎಂದು ಬಾಳ ಹಾದಿಯ ದಾರಿಯನ್ನು ತೋರಿಸಿದವಳು ನೀನು. ಕೋಪಿಸಿಕೊಂಡರೂ ಆ ಕ್ಷಣಕ್ಕೆ ಮಾತ್ರ ಕೋಪವಿರಲಿ ಎಂದು ತಪ್ಪು ಹಾದಿಯಲ್ಲಿ ನಡೆದಾಗ, ನಾನು ಮಾಡುತ್ತಿರುವುದನ್ನು ಧಿಕ್ಕರಿಸಿ ಗೆಳೆಯಾ ಬಾ ಕುಳಿತುಕೋ ಇದೆಲ್ಲಾ ಬೇಡ ಎಂದು ತಿಳಿಹೇಳಿದವಳು ನೀನು.
ಗೆಳೆಯಾ, ಮುಂದೊಂದು ದಿನ ಯಾವುದೋ ಕಾಲಘಟ್ಟದಲ್ಲಿ ಈ ಎಲ್ಲಾ ಮಾತುಗಳು ನಿನ್ನ ಪಾಲಿಗೆ ತುಂಬಾ ಸಹಕಾರಿಯಾಗುತ್ತದೆ ಎಂದು ಹೇಳಿ ಅಂದು ಪೀಡಿಸುತ್ತಿದ್ದವಳು ನೀನು. ಅಂದು ಹೇಳಿದ ಪಾಠ, ಕೇಳಿಸಿಕೊಂಡ ಹಿತವಚನ, ಜತೆಗೊಂದು ಅದೃಷ್ಟರೇಖೆ. ಇದೆಲ್ಲಕ್ಕಿಂತ ಹೆಚ್ಚಾಗಿ ನನಗೊಂದು ಅದ್ಭುತ ಗೆಳತಿಯಾಗಿ ಲಭಿಸಿದ ನೀನು.
ಇಂದು ನಿನಗೆ ೨೫ ರ ಸಂಭ್ರಮ. ನಿನ್ನ ಗೆಳತಿಯಾಗಿ ಪಡೆದ ನನಗೆ ಸುಂದರ ಘಳಿಗೆ. ಕಳೆದ ಹಲವು ವರ್ಷಗಳಿಂದ ಈ ಸಂಭ್ರಮ ಜತೆಗಿದೆ. ಇದು ಎಂದೆಂದಿಗೂ ಇರಲಿ, ಮುಂದಿನ ಸಂಭ್ರಮಕ್ಕೆ ನಾಂದಿಯಾಗಲಿ.
ನಿನ್ನ ಗೆಳತಿಯಾಗಿ ನೀಡಿದ ನಿನ್ನ ಅಪ್ಪ ಅಮ್ಮನಿಗೊಂದು ಥ್ಯಾಂಕ್ಸ್ ಹೇಳುತ್ತಾ, ಸದಾಕಾಲ ಸಂತಸ ನಿನ್ನ ಜತೆಗೆ ಇರಲಿ ಎಂದು ಹಾರೈಸುತ್ತಾ,
ನಿನಗೆ ಜನುಮದಿನದ ಶುಭಾಶಯ