Wednesday, September 03, 2008

ವಿಘ್ನ ನಿವಾರಕಾ, ಮೊದಲು ‘ಅವಳು’, ಆ ಮೇಲೆ ನೀನು..

ಸ್ವಾಗತ. ಎಲ್ಲರಿಗೂ ಬ್ಲಾಗ್ ಮಾಡುವುದು ಹೇಳಿ ಕೊಟ್ಟು ನನ್ನ ಬ್ಲಾಗ್ ಮುಂದುವರಿಯದೇ ಇರುವುದನ್ನು ಕಂಡು ಕೆಲವರು ಏನಾದರೂ ಬರೆಯೋ ಯೋಚನೆ ಇದೆಯೋ ಇಲ್ಲವೇ ಎಂದು ಗದರಿಸುತ್ತಿದ್ದರು. ಹಿಂದಿನಂತೆ ಭರವಸೆಯನ್ನು ನಾನು ನೀಡುತ್ತಿಲ್ಲ. ಆದರೆ ಬರೆಯಬೇಕು. ಅದಕ್ಕೆ ನಿರ್ಬಂಧ ವಿಧಿಸಿದರೆ ಪ್ರಯೋಜನವಿಲ್ಲ ಎಂದು ತಿಳಿದು ಏನಾದರೂ ಬರೆಯಲೇ ಬೇಕು ಎಂದು ಕುಳಿತಿದ್ದೇನೆ.

ಕಳೆದ ಒಂದು ತಿಂಗಳಿನಿಂದ ಅನಿವಾರ್ಯ ಕಾರಣಗಳಿಂದ ರಜೆ ಪಡೆದು ಮನೆಯಲ್ಲಿದ್ದೆ. ಇಂದಿಗೂ ಮನೆಗೆ ಹೋಗುವಾಗ ಸಿಗುವ ಸಂಭ್ರಮ ನನಗೆ ಬೇರೆಲ್ಲೂ ಲಭಿಸಿಲ್ಲ. ಅದರಲ್ಲೂ ಈ ಬಾರಿ ಒಂದು ತಿಂಗಳು ಭರ್ತಿ ಮನೆಯವರ ಜತೆಯೇ ಇದ್ದೆ. ಅವರ ಸಂಭ್ರಮದಲ್ಲಿ ಪಾಲ್ಗೊಂಡೆ. ಕಳೆದ ಹಲವು ವರ್ಷಗಳಿಂದ ಲಭಿಸದ ಅನನ್ಯ ಪ್ರೀತಿ ಬೊಗಸೆಯೆರೆದು ಕೊಡಲು ಊರವರು ಇದ್ದರು.

ವೃತ್ತಿಯ ಬಗ್ಗೆ, ನನ್ನ ಮುದ್ದಿನ ಗೆಳತಿಯ ಬಗ್ಗೆ, ಬೆಂಗಳೂರಿನ ಕೆಲಸದ ಅನುಭವದ ಬಗ್ಗೆ ಎಲ್ಲರೂ ಸಂಭ್ರಮದಿಂದ ಕೇಳಿ ತಿಳಿದು ಕೊಂಡರು. ಅದರಲ್ಲೂ ಗೆಳತಿಯ ಬಗ್ಗೆ ಪ್ರೀತಿ ಎಲ್ಲರಿಗೂ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅವರಿರುವುದೇ ಹಾಗೆ ನಾನು ಊರಿಗೆ ಹೋದರೆ ಅವರಿಗೆ ನಾನು ಬೇಕಾಗಿಲ್ಲ, ಅವರಿಗೆ ‘ಗೆಳತಿ’ಯೇ ಬೇಕು. ನಾನು ತಿಂಗಳುಗಳ ಬಳಿಕ ಅಥವಾ ಯಾವತ್ತು ಊರಿಗೆ ಹೋದರೂ ಮೊದಲ ಮಾತು ಆರಂಭವಾಗುವುದು ಇವಳ ಬಗ್ಗೆ ವಿಚಾರಣೆ ಮಾಡಿದ ನಂತರವೇ.

ಅಂತಹ ಒಂದು ಮೋಡಿ ಮಾಡಿಬಿಟ್ಟಿದ್ದಾಳೆ. ಆದರೆ ಎಂದಿಗೂ ನಾನು ‘ಅವರು’ ಆಕೆಯ ಮೇಲೆ ತೋರುವ ಪ್ರೀತಿಯನ್ನು ನಿರಾಕರಿಸಿಲ್ಲ. ನಿರಾಕರಿಸುವುದೂ ಇಲ್ಲ. ಯಾಕೆಂದರೆ ಅದಕ್ಕೆ ಆಕೆ ಅರ್ಹಳು. ಇಂದು ನಾನು ಈ ರೀತಿ ಇರಬೇಕು ಎಂದರೆ ಅದಕ್ಕೆ ಎಲ್ಲರೂ ಅಕ್ಕರೆಯಿಂದ ಮುದ್ದಿಸುವ ಅವಳೇ ಕಾರಣ. ಅವಳ ಬಗ್ಗೆ ಪ್ರೀತಿಯಿಂದ ಇನ್ನೆಂದಾದರೂ ಬರೆದೇನು. ಅಲ್ಲಿಯವರೆಗೆ ನೀವು ಕಾಯಲೇಬೇಕು.

ಒಂದು ತಿಂಗಳಲ್ಲಿ ಹಲವು ರೀತಿಯಲ್ಲಿ ವಿವಿಧ ಅನುಭವಗಳಾದವು. ಅದನ್ನು ಒಂದೇ ಮಿತಿಯೊಳಗೆ ಸೀಮಿತವಾಗಿಟ್ಟುಕಂಡು ಬರೆಯಲು ಹೋದರೆ ಅದು ಸರಿಯಾಗಿರಲ್ಲ. ಕೆಲಸವಿಲ್ಲದೆ ಕಳೆದ ಸುಮಾರು ಒಂದು ತಿಂಗಳು ತುಂಬಾ ಬೋರ್ ಹೊಡೆಯುತ್ತಿತ್ತು ಎಂದರೆ ತಪ್ಪಲ್ಲ. ಅದಕ್ಕೆ ಹಲವು ಪುಸ್ತಕಗಳನ್ನು ಓದಿದೆ, ಹಲವು ಸಿನೆಮಾಗಳನ್ನು ನೋಡಿದೆ. ಒಂದಕ್ಕಿಂತ ಒಂದು ತುಂಬಾ ಇಂಟರೆಸ್ಟಿಂಗ್ ಎಂದರೂ ತಪ್ಪಲ್ಲ.

ಕಳೆದು ಹೋಗಿದ್ದ ಹಲವು ಸಿಕ್ಕಿದವು, ಇನ್ನು ಹಲವನ್ನು ಹೊಸದಾಗಿ ಕಲಿತುಕೊಂಡೆ. ಒಟ್ಟಾರೆ ಕಳೆದ ಒಂದು ತಿಂಗಳು ತೀರಾ ವೇಸ್ಟ್ ಎಂದು ಹೇಳುವ ಹಾಗಿಲ್ಲ. ಬದುಕಲು ಒಂದು ಜೀವನೋತ್ಸಾಹ ಬೇಕು. ಅದು ಎಲ್ಲರಲ್ಲೂ ಇರಬೇಕು, ಇರುತ್ತದೆ. ಅದನ್ನು ಅರಿಯವ ಪ್ರಯತ್ನ ಮಾಡಬೇಕು ಅಷ್ಟೇ.

ಏನೇ ಇರಲಿ, ಇಂದು ಗಣೇಶ ಚತುರ್ಥಿ. ಎಲ್ಲ ವಿಘ್ನಗಳನ್ನು ನಿವಾರಿಸುವ ವಿನಾಯಕನನ್ನು ಆರಾಧಿಸುವ ದಿನ. ಎಲ್ಲ ವಿಘ್ನಗಳೂ ನಿವಾರಣೆಯಾಗಲಿ, ವಿಶ್ವದಲ್ಲಿ ಸುಖ ಶಾಂತಿ ನೆಲೆಸಲಿ ಎನ್ನುತ್ತಾ ಸದ್ಯಕ್ಕೆ ಪುಟ್ಟ ಬ್ರೇಕ್.

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯ...

2 comments:

ಮಲ್ಲಿಕಾಜು೯ನ ತಿಪ್ಪಾರ said...

`MODALU AVALU' NANTRA gANESHA ANTA HELTIDIRALLA cHEVAR MHAHASHAYARE.... yARADU 'avalu".. ?

Enadru aagli.. Bahala dinagalanantra blog update madidiri thanks... Lekhana Chennagide

Keep on

Anonymous said...

ಯಾರವಳು ಚೇವಾರ್....?

ಎಂ.ಎಲ್. ಲಕ್ಷ್ಮೀಕಾಂತ್
ಮಂಡ್ಯ.